ನವದೆಹಲಿ prajakiran.com : ಧಾರವಾಡ ಜಿಲ್ಲೆಯ ಬಿಜೆಪಿ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಗೆ ಜಾಮೀನು ನೀಡದಂತೆ ಸಿಬಿಐ ಸುಪ್ರೀಂಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದೆ.
ಆರೋಪಿಯು ಪ್ರಬಲ ವ್ಯಕ್ತಿಯಾಗಿದ್ದು, ಸಾಕ್ಷ್ಯಗಳನ್ನು ನಾಶ ಮಾಡುವ, ಸಾಕ್ಷಿಗಳನ್ನು ಬೆದತಿಸುವ ಮತ್ತು ವಿಚಾರಣೆಯ ದಿಕ್ಕನ್ನು ತಪ್ಪಿಸುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.
ಇಂತಹ ವ್ಯಕ್ತಿ ಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಮನವಿ ಮಾಡಿದೆ.
ಈ ಬಗ್ಗೆ ಈಗಾಗಲೇ ಕರ್ನಾಟಕದ ಸಿಬಿಐ ವಿಶೇಷ ನ್ಯಾಯಾಲಯ, ಧಾರವಾಡ ಹೈಕೋರ್ಟ್, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ, ಬೆಂಗಳೂರು ಹೈಕೋರ್ಟ್ ತಿರಸ್ಕರಿಸಿದೆ ಎಂದು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಸುದೀರ್ಘ ನೂರಾರು ಪುಟಗಳ ಅಫಿಡೇವಿಟ್ ನಲ್ಲಿ ವಿವರಿಸಿದೆ.
ಇದಲ್ಲದೆ, ಮಾಜಿ ಸಚಿವ ವಿನಯ ಕುಲಕರ್ಣಿ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಜೊತೆಗೆ ನೇರ ಸಂಪರ್ಕ ಹೊಂದಿದ್ದು, ಸಾಕ್ಷ್ಯ ನಾಶದ ಯತ್ನ, ಯೋಗೀಶಗೌಡ ಸಹೋದರ ಗುರುನಾಥ ಗೌಡ ಜೊತೆಗೆ ರಾಜೀ ಸಂಧಾನ ನಡೆಸಿದ ಕುರಿತು ಸಾಕ್ಷ್ಯ ಲಭಿಸಿವೆ.
ಹಾಗೂ ಯೋಗೀಶಗೌಡ ಪತ್ನಿಗೆ ಹಣ ನೀಡಿ
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಪ್ರಕರಣದ ವಿರುದ್ಧ ನಿಲ್ಲುವಂತೆ ಮಾಡಲಾಯಿತು ಎಂದು ರಾಕೇಶ ರಂಜನ್ ನೇತೃತ್ವದ ಸಿಬಿಐ ಅಧಿಮಾರಿಗಳ ತಂಡ ಉಲ್ಲೇಖಿಸಿದೆ.