ಗದಗ prajakiran.com :
ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಕೇಳಿ, ಹಣ ನೀಡಿ, ಅಗತ್ಯ ದಾಖಲೆ ಪಡೆಯುವುದು ಸರ್ವೆ ಸಾಮಾನ್ಯ.
ಆದರೆ, ಅದನ್ನು ಬಿಟ್ಟು, ಗದಗ ಜಿಲ್ಲೆಯ ಕೃಷಿ ಅಧಿಕಾರಿಯೊಬ್ಬರಿಗೆ ಹೆದರಿಸಿ, ಬೆದರಿಸಿ, ಅವರ ಬಳಿಯಿದ್ದ 20 ಗ್ರಾಮ ಬಂಗಾರ, 65 ಸಾವಿರ ನಗದು ಕಸಿದುಕೊಂಡ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೌದು, ಇದು ಅಚ್ಚರಿಯಾದ್ರೂ ಸತ್ಯ. ಈ ಘಟನೆ ಜುಲೈ 19 ರಂದು ಸಂಜೆ 7 ಗಂಟೆ ಸುಮಾರಿಗೆ ಗದಗ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜೇಶ ಪೂಜಾರ ಅವರ ಜೊತೆಗೆ ನಡೆದಿದೆ.
ಗದಗನ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ನಡೆದಿದ್ದು, ಕಚೇರಿಯ ಅವಧಿಯ ನಂತರ ನಡೆದಿದ್ದು, ಜುಲೈ 24 ರಂದು ಈ ಕುರಿತು ಪ್ರಕರಣ ದಾಖಲಿಸಲಾಗಿದೆ.
20 ಗ್ರಾಮ ಬಂಗಾರ ಹಾಗೂ ನಗದು ಸೇರಿದಂತೆ ಒಟ್ಟು 1,35,000 ಮೌಲ್ಯ ನಷ್ಟವಾಗಿದೆ ಎಂದು ದೂರಿನಲ್ಲಿ ನಮೂದಿಸಲಾಗಿದೆ.
ಧಾರವಾಡದ ನಾಗರಾಜ ಕರೆಣ್ಣವರ ಮಾಹಿತಿ ಹಕ್ಕು ಅಡಿ ವಿವಿಧ ಮಾಹಿತಿ ಕೇಳಿದ್ದರು. ದಾಖಲೆ ನೀಡಲು 24,500 ರೂಪಾಯಿ ಡಿಡಿ ನೀಡಿ ಮಾಹಿತಿಯನ್ನು ಪಡೆಯಲು ಹೇಳಿದ್ದರು.
ಆದರೆ, ಅದನ್ನು ನಿರಾಕರಿಸಿದ ನಾಗರಾಜ ಕರೆಣ್ಣವರ, ನಿನ್ನ ನೌಕರಿ ಹೇಗೆ ಅಲುಗಾಡಿಸಬೇಕು ಅಂತ ಗೊತ್ತು ಎಂದು ಕಚೇರಿಯ ಕೆಲ ನೌಕರರ ಕುಮ್ಮಕ್ಕಿನಿಂದ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಕಚೇರಿಯಿಂದ ಮನೆಗೆ ತೆರಳುವರೆಗೆ ಕಾಯ್ದು ಕಾರಿನಲ್ಲಿ ಹತ್ತಿಸಿಕೊಂಡು ಎಳೆದಾಡಿ, ನನ್ನ ಬಳಿಯಿದ್ದ 65 ಸಾವಿರ ನಗದು, 20 ಗ್ರಾಮ ಬಂಗಾರ ಚೈನ್ ಕಸಿದುಕೊಂಡು ಹೋಗಿದ್ದಾರೆ ಎಂದು ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜೇಶ ಪೂಜಾರ ಅವರು ವಿವರಿಸಿದ್ದಾರೆ.
ಧಾರವಾಡದ ನಾಗರಾಜ ಕರೆಣ್ಣವರ ವಿರುದ್ದ ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಕುರಿತು ಪ್ರಜಾಕಿರಣ.ಕಾಮ್ ಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿರುವ ನಾಗರಾಜ ಕರೆಣ್ಣವರ, ನಾನು ಮಾಹಿತಿಯನ್ನು ಕೇಳಿದ್ದು ಸತ್ಯ.
ಇದರಲ್ಲಿ 55 ಲಕ್ಷ ಗೋಲ್ ಮಾಲ್ ನಡೆದ ಮಾಹಿತಿ ಅವರ ಕಚೇರಿಯ ಸಿಬ್ಬಂದಿ ಬಳಿ ಇದೆ. ಹೀಗಾಗಿ ಅವರೇ ಡೀಲ್ ಕುದುರಿಸಲು ಯತ್ನಿಸಿದರು.
ಆದರೆ ನಾನು ಅದಕ್ಕೆ ಒಪ್ಪದಿದ್ದಾಗ ಈ ರೀತಿಯ ನಾಟಕ ಸೃಷ್ಟಿಸಿದ್ದಾರೆ. ಅವರು ಕಾರೇ ಹತ್ತಿಲ್ಲ.
ಅಲ್ಲದೆ, ಕೃಷಿ ಇಲಾಖೆಯ ಮಾಹಿತಿ ಹಕ್ಕು ಅಧಿಕಾರಿಯರೇ ಬೇರೆ, ಅದರ ವಿರುದ್ದ ಮೇಲ್ಮನವಿ ಪ್ರಾಧಿಕಾರಕ್ಕೂ ಪತ್ರ ಬರೆದಿದ್ದು ಉಚಿತ ಮಾಹಿತಿ ಪೂರೈಸಲು ಕೋರಿದ್ದೇನೆ
ಜಂಟಿ ನಿರ್ದೇಶಕರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಉದ್ದೇಶದಿಂದ ದೂರು ದಾಖಲಿಸಿದ್ದಾರೆ ಎಂದು ದೂರಿದರು