ಧಾರವಾಡ prajakiran.com : ರಾಜ್ಯದಲ್ಲಿ ಕೋವಿಡನಂತಹ ಸಂದರ್ಭದಲ್ಲಿ ಜನರ ಹಿತ ಕಾಪಾಡಬೇಕಾದ ಶಾಸಕ ಅರವಿಂದ ಬೆಲ್ಲದ ಅವರು ಅಧಿಕಾರದ ಹಿಂದೆ ಬಿದ್ದಿರುವುದು ದುರಾದೃಷ್ಟಕರ ಸಂಗತಿ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರರಿಂದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ.
ಮಳೆಗಾಲ ಆರಂಭವಾಗಿದ್ದು, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆ ಇದೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಶಾಸಕ ಅರವಿಂದ ಬೆಲ್ಲದ ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ದೆಹಲಿ, ಬೆಂಗಳೂರು ತಿರುಗುವುದನ್ನು ಬಿಟ್ಟು, ತಮ್ಮ ಕ್ಷೇತ್ರದ ಜನರ ಹಿತ ಕಾಪಾಡಲು ಮುಂದಾಗಬೇಕು ಎಂದರು.
ಅರವಿಂದ ಬೆಲ್ಲದ ಅವರಿಗೆ ಶಕ್ತಿ ಇದ್ದರೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಬಹಿರಂಗವಾಗಿ ಹೇಳಲಿ.
ಅದನ್ನು ಬಿಟ್ಟು ದೆಹಲಿಗೆ ಹೋಗಿದ್ದರೂ ನಾನು ಹೋಗಿಲ್ಲ ಎಂದು ಹೇಳುತ್ತ ಜನರ ಹಾದಿ ತಪ್ಪಿಸುತ್ತಿದ್ದಾರೆ. ಮೊದಲೇ ಕ್ಷೇತ್ರದ ಜನರಿಗೆ ಸುಳ್ಳು ಹೇಳುತ್ತ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿಲ್ಲ ಎಂದು ಹುಣಸಿಮರದ ಕಿಡಿಕಾರಿದರು.
ಯಾವುದೇ ಪಕ್ಷ ಕಟ್ಟದೆ ಕಾರ್ಯಕರ್ತರನ್ನು ತುಳಿದು ಶಾಸಕರಾಗಿ ಇದೀಗ ಮುಖ್ಯಮಂತ್ರಿಯಾಗಲು ಹೊರಟಿರುವ ಬೆಲ್ಲದ ಅವರು ಪಾಲಿಕೆ ಆಯುಕ್ತರಿಗೆ ಹೇಳಿ ಒಂದು ಕೆಲಸ ಮಾಡಲಿ ಎಂದು ಹುಣಸಿಮರದ ಸವಾಲು ಎಸೆದರು.
ಮುಖಂಡರಾದ ಶಾಂತವೀರ ಬೆಟಗೇರಿ, ರಾಜು ಅಂಬೋರೆ, ರಮಾನಾಥ ಶೆಣೈ ಈರಣ್ಣ ಬಾರಕೇರ ಸುದ್ದಿಗೋಷ್ಠಿಯಲ್ಲಿದ್ದರು.