ಧಾರವಾಡ prajakiran.com : ಧಾರವಾಡ ನ್ಯಾಯಾಲಯದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಂಜಯ ಗುಡಗುಡಿ ಅವರು ಏ.16 ರಂದು ಸಂಜೆ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಕೋವಿಡ್ ಎಸ್.ಓ.ಪಿ. ಹಾಗೂ ಜೈಲು ನಿಯಮಗಳ ಪಾಲನೆ ಕುರಿತು ಪರಿಶೀಲಿಸಿದರು.
ಕೇಂದ್ರ ಕಾರಾಗೃಹದಲ್ಲಿ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನೀಡಿರುವ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಿರುವ ಬಗ್ಗೆ ಅವರು ಪರಿಶೀಲಿಸಿ, ಶಿಕ್ಷೆಗೆ ಒಳಪಟ್ಟ ಅಪರಾಧಿ, ವಿಚಾರಣಾಧೀನ ಮತ್ತು ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ಆರೋಪಿತರು ಜೈಲಿಗೆ ಆಗಮಿಸಿದಾಗ ಅವರಿಗೆ ಜೈಲು ಮುಖ್ಯ ಕಟ್ಟಡದ ಹೊರ ಭಾಗದ ಪ್ರತ್ಯೇಕ ಕಟ್ಟಡದಲ್ಲಿ 21 ದಿನ ಹಾಗೂ ಜೈಲಿನೊಳಗೆ ಪ್ರತ್ಯೇಕವಾಗಿ 14 ದಿನ ಕ್ವಾರಂಟೈನ್ ಆಗುವ ಕೊಠಡಿಗಳನ್ನು ಪರಿಶೀಲಿಸಿದರು.
ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಂಜಯ ಗುಡಗುಡಿ ಅವರು ಒಬ್ಬರೇ ಪ್ರತ್ಯೇಕವಾಗಿ ಖೈದಿಗಳೊಂದಿಗೆ ಊಟ, ವಸತಿ, ಚಿಕಿತ್ಸೆ ಹಾಗೂ ಸಂವಹನ ಸೌಲಭ್ಯ ಕುರಿತು ಮಾತನಾಡಿಸಿ ಅಭಿಪ್ರಾಯ ಪಡೆದರು.
ಈ ಸಂದರ್ಭದಲ್ಲಿ ಜೈಲು ಸೌಲಭ್ಯಗಳ ಬಗ್ಗೆ ಖೈದಿಗಳು ತೃಪ್ತಿ ವ್ಯಕ್ತಪಡಿಸಿದರು.
ನಂತರ ಅವರು ಖೈದಿಗಳು ತಮ್ಮ ಕುಟುಂಬಸ್ಥರು, ಸಂಬಂಧಿಗಳು ಮತ್ತು ವಕೀಲರೊಂದಿಗೆ ಮುಖಾಮುಖಿ ಸಂವಹನಕ್ಕಾಗಿ ಸ್ಥಾಪಿಸಿರುವ ಇ-ಮುಲಾಕತ್ (ವಿ.ಸಿ) ಸೌಲಭ್ಯ ಹಾಗೂ ಸ್ಥಿರ ದೂರವಾಣಿ ಪ್ರ್ರಿಜನ್ ಕಾಲ್ ಸಿಸ್ಟಮ್ ಅಳವಡಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಜೈಲು ಅಧೀಕ್ಷಕ ಎಂ.ಎ. ಮರಿಗೌಡ ಮಾತನಾಡಿ, ಧಾರವಾಡ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾದಿನ 246 ಪುರುಷ, 25 ಮಹಿಳಾ ಸೇರಿ 271 ಜನ ಹಾಗೂ ಶಿಕ್ಷೆಗೆ ಒಳಪಟ್ಟ 303 ಪುರುಷ, 09 ಮಹಿಳೆ ಸೇರಿ ಒಟ್ಟು 583 ಜನರಿದ್ದಾರೆ. ಮತ್ತು 6 ತಿಂಗಳ ಹಾಗೂ ಒಂದು ವರ್ಷ ತುಂಬಿರುವ ಎರಡು ಚಿಕ್ಕ ಮಕ್ಕಳಿದ್ದಾರೆ.
ಎಲ್ಲರಿಗೂ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಜೈಲು ವೈದ್ಯಾಧಿಕಾರಿಯಿಂದ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಉಚಿತವಾಗಿ ಎಲ್ಲರಿಗೂ ಮಾಸ್ಕ್ ನೀಡಲಾಗುತ್ತಿದೆ. ಮತ್ತು ಜೈಲು ಆವರಣದಲ್ಲಿ ಪ್ರತಿದಿನ ಮೂರು ಸಲ ಹೈಪೆೀಕ್ಲೋರೈಡ್ ದ್ರಾವಣ ಸಿಂಪರಣೆ ಮಾಡಲಾಗುತ್ತಿದೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಂಜಯ ಗುಡಗುಡಿ ಅವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ಕಾರಾಗೃಹದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.