ಧಾರವಾಡ prajakiran. com : ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಒಂದು ದೇಶ ಒಂದು ಪಠ್ಯದ (ಒನ್ ನೇಶನ್ ಒನ್ ಸಿಲ್ಯಾಬಸ್) ಹೆಸರಿನಲ್ಲಿ ವಿವಿಧ ಹುದ್ದೆಗೆ ತರಬೇತಿ ನೀಡಿ ಆನಂತರ
ಕೇಂದ್ರ ಸರಕಾರದಲ್ಲಿ ಉನ್ನತ ಮಟ್ಟದ ನೌಕರಿ ಕೊಡಿಸುವುದಾಗಿ ಆಮೀಷ ಒಡ್ಡಿ ರಾಘವೇಂದ್ರ ಕಟ್ಟಿ ಹಾಗೂ ಪೂರ್ಣಿಮಾ ಸೊಪ್ಪಿಮಠ ವಂಚಿಸಿದ್ದಾರೆ ಎಂದು ಅಕ್ಷತಾ ಹಿರೇಮಠ ಎಂಬುವರು ಬುಧವಾರ ರಾತ್ರಿ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೇಂದ್ರ ಸರಕಾರಿ ನೌಕರಿ ಕೊಡಿಸುವುದಾಗಿ 2020ರಲ್ಲಿಯೇ 2.40 ಲಕ್ಷ ರೂಪಾಯಿ ಪಡೆದು ಮೂರು ವರ್ಷ ಕಳೆದರೂ ನೌಕರಿ ಕೊಡಿಸದೆ ವಂಚನೆ ಮಾಡಿದ್ದಾರೆ.
ಅಲ್ಲದೆ, ಕೊಟ್ಟ ಹಣ ವಾಪಸ್ ಕೇಳಿದರೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈಗಾಗಲೇ ರಾಘವೇಂದ್ರ ಕಟ್ಟಿ ವಿರುದ್ದ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ದಾಖಲಾದ ಮೂರನೇ 420,506 ಪ್ರಕರಣ ಇದಾಗಿದೆ.
ಧಾರವಾಡದ ಕಮಲಾಪುರ ಕ್ರಾಸ್ ನಲ್ಲಿರುವ ಎಸ್ ಜಿ ಎಸ್ ಎಸ್ ಹೆಚ್ ಆರ್ ಕನ್ಸಲ್ಟೆನ್ಸಿ ಮೂಲಕ ನಂಬಿಸಿ 2.40 ಲಕ್ಷ ರೂಪಾಯಿ ಪಡೆದು ಆನಂತರ ನೌಕರಿಯು ಕೊಡಿಸದೆ, ಪಡೆದ ಹಣವನ್ನು ಹಿಂತಿರುಗಿಸದೆ ವಂಚಿಸಿದ ಆರೋಪದ ಮೇಲೆ 420 ಮೋಸ, ವಂಚನೆ ಹಾಗೂ 506 ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ.
ನೌಕರಿ ಸಿಗದೆ ಮೂರು ವರ್ಷ ಪರದಾಡಿ ನಂತರ ಮರಳಿ ಹಣ ಕೇಳಿದರೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ನೊಂದಿರುವ ಅಭ್ಯರ್ಥಿ ಗದಗ ಮೂಲದ ಅಕ್ಷತಾ ಹಿರೇಮಠ ಎಂಬುವರು ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಮೂರು ಪ್ರಕರಣ ದಾಖಲಾದರೂ ಧಾರವಾಡದ ಉಪನಗರ ಪೊಲೀಸರು ಮಾತ್ರ ಈವರೆಗೆ ರಾಘವೇಂದ್ರ ಕಟ್ಟಿಯನ್ನು ಕರೆದು ವಿಚಾರಿಸುವ ಅಥವಾ ಬಂಧಿಸುವ ಗೋಜಿಗೆ ಹೋಗದಿರುವುದು ಹತ್ತು ಹಲವು ಅನುಮಾನಗಳನ್ನು ಹುಟ್ಟು ಹಾಕಿರುವುದು ಸುಳ್ಳಲ್ಲ.