ಧಾರವಾಡ ಪ್ರಜಾಕಿರಣ.ಕಾಮ್ : ತಾಲೂಕಿನ ನರೇಂದ್ರ ಗ್ರಾಮದ ಗ್ರಾಮದೇವಿಯರಾದ ಶ್ರೀ ದ್ಯಾಮವ್ವ ಹಾಗೂ ದುರ್ಗವ್ವ ದೇವಿ ಜಾತ್ರೆಯ ಅಂಗವಾಗಿ ಭಕ್ತರ ಹರ್ಷೋದ್ಧಾಗರೊಂದಿಗೆ ಶುಕ್ರವಾರ ರಥೋತ್ಸವ ಜರುಗಿತು.
ದೇವಿಯರ ಮೂರ್ತಿಗಳನ್ನು ರಥದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿದ್ದು ವಿಶೇಷವಾಗಿತ್ತು. ರಥವು ಗ್ರಾಮದ ತೇರಿನ ಅಗಸಿಯಿಂದ ಪಾದಗಟ್ಟಿಯವರೆಗೆ ಸಾಗಿತು.
ಅಕ್ಕಪಕ್ಕದ ಮನೆಗಳ ಮೇಲೆ ನಿಂತಿದ್ದ ಸಾವಿರಾರು ಭಕ್ತರು ದೇವಿಯರಿಗೆ ಪುಷ್ಪವೃಷ್ಟಿಯ ಮೂಲಕ ಭಕ್ತಿಯನ್ನು ಸಮರ್ಪಿಸಿದರು.
೨೨ ವರ್ಷಗಳ ನಂತರ ಜರುಗಿದ ಜಾತ್ರೆಯಲ್ಲಿ ಸುತ್ತಮುತ್ತಲಿನ ಸಾವಿರಾರು ಭಕ್ತರು ಪಾಲ್ಗೊಂಡು ರಥಬೀದಿಯುದ್ದಕ್ಕೂ ಸಾಗಿ ಉಧೋ ಉಧೋ ಉದ್ಘಾರ ಮೊಳಗಿಸಿದರು.
ರಥೋತ್ಸವದ ನಂತರ ದೇವಿಯರನ್ನು ಪಾದಗಟ್ಟಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಹರಕೆ ಹೊತ್ತ ಭಕ್ತರು ದೇವಿಯ ಉಡಿ ತುಂಬಿದರು.
ಮೇ ೧೦ರವರೆಗೆ ಉಡಿ ತುಂಬುವ ಕಾರ್ಯಕ್ರಮ ಮುಂದುವರಿಯಲಿದೆ. ೧೧ರಂದು ಗ್ರಾಮದೇವಿಯರಿಗೆ ಪಾದಗಟ್ಟಿಯಲ್ಲಿ ಉಡಿ ತುಂಬುವುದು,
ಬೆಳಗ್ಗೆ ೧೧ ಗಂಟೆಗೆ ಧರ್ಮಸಭೆ, ರಾತ್ರಿ ಸೀಮೆಗೆ ಹೋಗುವ ಕಾರ್ಯಕ್ರಮ ಮತ್ತು ೧೬ರಂದು ಗ್ರಾಮದೇವಿಯರನ್ನು ಗದ್ದಿಗೆಗೊಳಿಸುವ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.