ಧಾರವಾಡ prajakiran.com : ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದೈವಾರ್ಷಿಕ ಚುನಾವಣೆಗೆ ಅಕ್ಟೋಬರ್ ೨೮ ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಅಕ್ಟೋಬರ್ ೨೬ ರ ಸಂಜೆ ೫ ಗಂಟೆಗೆ ಪ್ರಚಾರ ಕಾರ್ಯ ಅಂತ್ಯವಾಗಿದೆ.
ಪ್ರಚಾರ ಕಾರ್ಯಕ್ಕೆ ಆಗಮಿಸಿದ್ದ ಕ್ಷೇತ್ರದ ಮತದಾರರಲ್ಲದ ವ್ಯಕ್ತಿಗಳು ಕೂಡಲೇ ಕ್ಷೇತ್ರದಿಂದ ಹೊರಗಡೆ ತೆರಳಬೇಕು . ಮತದಾನ ಮತ್ತು ಮತಗಳ ಎಣಿಕೆ ನಡೆಯುವ ಸಮಯದಲ್ಲಿ ಕ್ಷೇತ್ರದ ಧಾರವಾಡ,ಗದಗ,ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮದ್ಯಪಾನ, ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮತ್ತು ಮದ್ಯ ಸಂಗ್ರಹಣೆಯನ್ನು ನಿಷೇಧಿಸಲಾಗಿದೆ.
ಮತದಾನದ ದಿನದಂದು ಕ್ಷೇತ್ರದಾದ್ಯಂತ ಝರಾಕ್ಸ್,ಕಂಪ್ಯೂಟರ್ ಕೇಂದ್ರಗಳನ್ನು ಮುಚ್ಚಲು ಚುನಾವಣಾಧಿಕಾರಿಗಳೂ ಆಗಿರುವ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ
ಪ್ರಚಾರ ಮತ್ತಿತರ ಚುನಾವಣಾ ಸಂಬಂಧಿತ ಕಾರ್ಯಗಳಿಗಾಗಿ ಆಗಮಿಸಿದ್ದ ಕ್ಷೇತ್ರದ ಮತದಾರರಲ್ಲದ ವ್ಯಕ್ತಿಗಳು ಕೂಡಲೇ ಕ್ಷೇತ್ರದಿಂದ ನಿರ್ಗಮಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಮತದಾನ ಪೂರ್ವ ಅಕ್ಟೋಬರ್ ೨೬ ರಂದು ಸಾಯಂಕಾಲ ೫ ಗಂಟೆಯಿಂದ ಅ.೨೮ ರ ಮಧ್ಯರಾತ್ರಿ ೧೨ ಗಂಟೆಯವರೆಗೆ ಹಾಗೂ ಮತಗಳ ಎಣಿಕೆ ಹಿನ್ನೆಲೆಯಲ್ಲಿ ನವೆಂಬರ್ ೦೧ ರ ಮಧ್ಯರಾತ್ರಿ ೧೨ ಗಂಟೆಯಿಂದ ನ.೩ ರ ಮಧ್ಯರಾತ್ರಿ ೧೨ ಗಂಟೆಯವರೆಗೆ ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮತ್ತು ಮದ್ಯ ಸಂಗ್ರಹಣೆಯನ್ನು, ಮದ್ಯದ ಅಂಗಡಿಗಳು, ಬಿಯರ್ ಬಾರ್ಗಳು, ಕ್ಲಬ್ಗಳು ಮತ್ತು ಮದ್ಯದ ಡಿಪೋಗಳನ್ನು ಮುಚ್ಚತಕ್ಕದ್ದು ಇದಕ್ಕೆ ಸಂಬಂಧಿಸಿದಂತೆ ಲೈಸೆನ್ಸದಾರರು ಯಾವುದೇ ಪರಿಹಾರಕ್ಕೆ ಅರ್ಹರಾಗುವುದಿಲ್ಲ.
ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ: ಚುನಾವಣಾಧಿಕಾರಿಗಳಾಗಿರುವ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಧಾರವಾಡ ಜಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಡಿಯೋ ಸಂವಾದದ ಮೂಲಕ ಕ್ಷೇತ್ರದ ವಿವಿಧ ಜಿಲ್ಲೆಗಳ ಸಹಾಯಕ ಚುನಾವಣಾಧಿಕಾರಿಗಳೂ ಆಗಿರುವ, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದರು.
ಅ.೨೮ ರ ಸಂತೆ ರದ್ದು
ಬರುವ ಅ.೨೮ ರಂದು ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಅಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಧಾರವಾಡ ವಲಯ ಕಚೇರಿ -೨ ರ ಮಾರುಕಟ್ಟೆ ಪ್ರದೇಶದ ಪ್ರತಿದಿನದ ಸಂತೆ ಹುಬ್ಬಳ್ಳಿ ವಲಯ ಕಚೇರಿ-೫ ರ ಲಿಂಗರಾಜನಗರ, ವಿಶ್ವೇಶ್ವರ ನಗರ ಹಾಗೂ ಉಣಕಲ್ ಸಂತೆ ಮತ್ತು ವಲಯ ಕಚೇರಿ-೭ ರ ಅಪೂರ್ವ ನಗರದ ಸಿಲ್ವರ್ಟೌನ್ ವಾರದ ಸಂತೆ, ಬಾಫನಾ ಲೇಔಟ್ನ ವಾರದ ಸಂತೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ. ಮುಕ್ತ ಮತ್ತು ಶಾಂತಿಯುತ ಚುನಾವಣಾ ಆಯೋಜನೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.