ಹುಬ್ಬಳ್ಳಿ-ಧಾರವಾಡ ಪ್ರಜಾಕಿರಣ.ಕಾಮ್ : ನೀರು ಸರಬರಾಜು 358 ನೌಕರರ ಮರುನೇಮಕ ಹಾಗೂ ನಾಲ್ಕು ತಿಂಗಳ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಶುಕ್ರವಾರ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು ನೀರು ಸರಬರಾಜು ನೌಕರರು ಮತ್ತೆ ಹೋರಾಟ ಆರಂಭಿಸಿದರು.
ಫೆ.28 ರಂದು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಶಾಸಕರಾದ ಅರವಿಂದ ಬೆಲ್ಲದ ಅವರು ೩೦ ದಿನಗಳ ಸರಣಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಬಂದು ನಮ್ಮ ಬೇಡಿಕೆಯ ಭಾಗವಾಗಿ ಮೊದಲ ಹಂತದಲ್ಲಿ 82 ನೌಕರರನ್ನು ಮತ್ತು ಇನ್ನುಳಿದ ನೌಕರರನ್ನು ಹಂತ ಹಂತವಾಗಿ ತೆಗೆದುಕೊಳ್ಳುವ ಬಗ್ಗೆ ಮತ್ತು 4 ತಿಂಗಳ ವೇತನ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದ ನಂತರ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು.
ಆದರೆ ಇಂದಿಗೆ 24 ದಿನಗಳು ಕಳೆದರೂ ಯಾವುದೇ ಮರುನೇಮಕ ಮತ್ತು ಬಾಕಿ ವೇತನ ಬಿಡುಗಡೆ ಆಗದೇ ಇರುವದರಿಂದ ತಾತ್ಕಾಲಿಕವಾಗಿ ಹಿಂದಕ್ಕೆ ತೆಗೆದುಕೊಂಡ ಹೋರಾಟವನ್ನು ಇಂದು ಆರಂಭಿಸಲಾಗಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ತಿಳಿಸಿದರು.
ಅಲ್ಲದೆ, ನಾಳೆಯಿಂದಲೇ ವಾರ್ಡ್ ವಾರು ಜನರ ಮನೆ ಬಾಗಿಲಿಗೆ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನು ತಿಳಿಸಲು ಕರಪತ್ರ ಹಂಚಿಕೆ, ಸಹಿ ಸಂಗ್ರಹ ಅಭಿಯಾನ, ನೀರಿನ ಗಂಭೀರ ಸಮಸ್ಯೆ ಇರುವ ವಾರ್ಡಗಳಲ್ಲಿ ರಸ್ತೆ ತಡೆ ಚಳುವಳಿಯನ್ನು ಆಯಾ ಭಾಗದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಜನಾಂದೋಲನವಾಗಿ ಮಾರ್ಪಡಿಸುವ ಮೂಲಕ ಆಳುವ ದಪ್ಪ ಚರ್ಮದ ಸೊಕ್ಕಿನ ಸರಕಾರಕ್ಕೆ ಬಿಸಿ ತಾಕಿಸುವುದು ಅನಿವಾರ್ಯವಾಗಲಿದೆ ಎಂದು ಬಸವರಾಜ ಕೊರವರ ಎಚ್ಚರಿಸಿದರು.
ಜನಜಾಗೃತಿ ಸಂಘ ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ,
ಆರು ಜನರಿಗೆ ಇನ್ನು 3 ತಿಂಗಳ ವೇತನ ಬಿಡುಗಡೆ ಆಗಿಲ್ಲ.
ಜೊತೆಗೆ ನಾಲ್ಕು ತಿಂಗಳ ಬಾಕಿ ವೇತನ ತಕ್ಷಣ ಬಿಡುಗಡೆಗೆ ಕ್ರಮ ಜರುಗಿಸಬೇಕು ಮತ್ತು ಈ ಹಿಂದಿನಂತೆ ಪ್ರತಿ ಮೂರು-ನಾಲ್ಕು ದಿನಗಳಿಗೊಮ್ಮೆ ಎಲ್ಲಾ ವಾರ್ಡಗಳಿಗೆ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು
ಇದಲ್ಲದೆ, ಅವಳಿನಗರದ ಜನತೆಗೆ ನೀರಿನ ಬಿಲ್ ನಲ್ಲಿ ವಿಧಿಸಿರುವ ಮೂರು ತಿಂಗಳ ಬಡ್ಡಿ ಮನ್ನಾ ಮಾಡಬೇಕು ಮತ್ತು ಈ ಮೊದಲಿನಂತೆ ಜಲಮಂಡಳಿಗೆ ನೀರು ಸರಬರಾಜು ಜವಾಬ್ದಾರಿ ನೀಡಬೇಕು ಎಂದು ಆಗ್ರಹಿಸಿದರು
ಬಳಿಕ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು
ಪ್ರತಿಭಟನೆಯಲ್ಲಿ ಮಹಾಂತೇಶ ಗೌಡರ,
ಶೇಖು ಬೆಟಗೇರಿ, ಶರಣು ಕಂಬಾರ, ಶರಣಪ್ಪ ತಳವಾರ್,
ಹುಬ್ಬಳ್ಳಿ-ಧಾರವಾಡ ನೀರು ಸರಬರಾಜು ಹಂಗಾಮಿ, ಗುತ್ತಿಗೆ ನೌಕರರು ಉಪಸ್ಥಿತರಿದ್ದರು