ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ನಾಗರಾಜ ಕಿರಣಗಿ ನೇತೃತ್ವದಲ್ಲಿ ಘೋಷಣೆ ಕೂಗಿ ತೀವ್ರ ಆಕ್ರೋಶ
ಸಾವಿನ ಹೊಣೆ ಹೊರಲು ಎಲ್ ಆಂಡ್ ಟಿ ಕಂಪನಿ, ಮಹಾನಗರ ಪಾಲಿಕೆ, ಕೆ ಯು ಐ ಡಿ ಎಫ್ ಸಿಗೆ ಆಗ್ರಹ
ಶವ ಹೊತ್ತ ಅಂಬುಲೆನ್ಸ್ ಸಮೇತ ಒಂದು ಗಂಟೆಗೂ ಅಧಿಕ ಕಾಲ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ
ಧಾರವಾಡ ಪ್ರಜಾಕಿರಣ.ಕಾಮ್ : ಕಳೆದ ಎರಡು ವರ್ಷಗಳಿಂದ ಎಲ್ ಆ್ಯಂಡ್ ಟಿ ಕಂಪನಿ ನೀರು ಸರಬರಾಜು ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಇಂಜಿನೀಯರ್ವೊಬ್ಬರು ಕೆಲಸದ ಒತ್ತಡದಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗುರುವಾರ ಧಾರವಾಡದ ಮಹಾನಗರ ಪಾಲಿಕೆ ಕಚೇರಿ ಎದುರು ಇಂಜಿನಿಯರ್ ಅರುಣ ಯಂಡಿಗೇರಿ ಶವವಿಟ್ಟು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ನಾಗರಾಜ ಕಿರಣಗಿ ನೇತೃತ್ವದಲ್ಲಿ ಒಂದು ಗಂಟೆಗಳ ಕಾಲ ಬೃಹತ್
ಪ್ರತಿಭಟನೆ ನಡೆಸಲಾಯಿತು.
ಸಾವಿನ ಹೊಣೆಯನ್ನು ಎಲ್ ಆಂಡ್ ಟಿ ಕಂಪನಿ, ಮಹಾನಗರ ಪಾಲಿಕೆ ಹಾಗೂ ಕೆ ಯು ಐ ಡಿ ಎಫ್ ಸಿ ಹೊರಬೇಕು.
ಆತನ ಪತ್ನಿಗೆ ಉದ್ಯೋಗ ಹಾಗೂ ಹತ್ತು ಲಕ್ಷ ಪರಿಹಾರವನ್ನು ತಕ್ಷಣ ನೀಡಬೇಕು ಎಂದು ಪಟ್ಟು ಹಿಡಿದರು.
ಈಗಾಗಲೇ ಎಲ್ ಆಂಡ್ ಟಿ ಕಂಪನಿ ಮೂರು ಬಲಿಪಡೆದಿದ್ದು, ಉದ್ಯೋಗಿಗಳಿಗೆ ಈವರೆಗೂ ನೇಮಕಾತಿ ಪತ್ರ, ಪಿ ಎಫ್ ಹಾಗೂ ಇ ಎಸ್ ಐ ಸೌಲಭ್ಯ ನೀಡಿಲ್ಲ.
ಎಸ್ ಡಿ ಎಂ ಆಸ್ಪತ್ರೆ ಯಲ್ಲಿ ಅರುಣ್ ಹೃದಯಾಘಾತದಿಂದ ಸಾವನ್ನಪ್ಪಿದರೂ ಯಾರೊಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಆತನ ಸಾವಿಗೆ ನಾವು ಹೊಣೆಗಾರರಲ್ಲ ಎಂದು ಜವಾಬ್ದಾರಿ ಯಿಂದ ನುಣುಚಿಕೊಂಡಿದ್ದಾರೆ.
ಹೀಗಾಗಿ ನಾವು ಮಹಾನಗರ ಪಾಲಿಕೆ ಕಚೇರಿಗೆ ಅನಿವಾರ್ಯವಾಗಿ ಶವತಂದು ಪ್ರತಿಭಟನೆ ನಡೆಸಬೇಕಾಗಿದೆ ಎಂದು ಬಸವರಾಜ ಕೊರವರ ಕಿಡಿಕಾರಿದರು.
ಅಲ್ಲದೆ, ಘಟನಾ ಸ್ಥಳಕ್ಕೆ ಆಗಮಿಸಿದ ಮೇಯರ್ ಹಾಗೂ ಆಯುಕ್ತರಿಗೆ ನಾಳೆ ನಮಗೆ ಇದು ಸಂಬಂಧಿಸಿಲ್ಲ ಎಂದು ಕೈ ಎತ್ತಬೇಡಿ.
ಈಗಾಗಲೇ 82 ನೌಕರರ ಮರು ನೇಮಕ ವಿಚಾರದಲ್ಲಿ ಅನ್ಯಾಯ ಎಸಗಲಾಗಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ, ಇಂಜಿನಿಯರ್ ಅರುಣ ಬಾಳಿ ಬದುಕಬೇಕಾಗಿದ್ದ ಯುವ ಇಂಜಿನಿಯರ್, ಆತನ ಸಾವಿಗೆ ಕನಿಷ್ಟ ಹತ್ತು ಲಕ್ಷ ಪರಿಹಾರ ನೀಡಲೇಬೇಕು.
ಎಲ್ ಆಂಡ್ ಟಿ, ಮಹಾನಗರ ಪಾಲಿಕೆ, ಕೆ ಯು ಐ ಡಿ ಎಫ್ ಸಿ ಸಮಾನ ಹೊಣೆ ಎಂದು ದೂರಿದರು.
ಕರ್ನಾಟಕ ಥಿಂಕರ್ಸ್ ಪೋರಮ್ ಅಧ್ಯಕ್ಷ ಪಿ.ಎಚ್. ನೀರಲಕೇರಿ ಮಾತನಾಡಿ, ಹತ್ತು ಹನ್ನೆರಡು ದಿನಗಳು ಕಳೆದರೂ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ.
ಮಹಾನಗರ ಜನತೆ ಯುಗಾದಿಯ ದಿನದಂದು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಹಾಗೂ ಆಯುಕ್ತ ಗೋಪಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.
ಇದಲ್ಲದೆ, ಈವರೆಗೂ ಮೂವರು ಕಾರ್ಮಿಕರ ಬಲಿ ಆದರೂ ಮಹಾನಗರ ಪಾಲಿಕೆ, ರಾಜ್ಯ ಸರ್ಕಾರ ಏನಾದರೂ ಮಾಡಿದೆಯೇ ಎಂದು ಪ್ರಶ್ನಿಸಿದರು.
ಇಷ್ಟೆಲ್ಲಾ ಅನಾಹುತ ಮೇಲಿಂದ ಮೇಲೆ ನಡೆದರೂ ಮಹಾನಗರ ಪಾಲಿಕೆ ಎಚ್ಚೆತ್ತುಕೊಳ್ಳದಿರುವುದು
ದುರಂತ ಹಾಗೂ ದುರ್ಬಲವಾದ ಆಡಳಿತದ ವೈಖರಿಯೇ ಕಾರಣ ಎಂದು ಸದಸ್ಯರಾದ ದೀಪಾ ಸಂತೋಷ ನೀರಲಕಟ್ಟಿ,ಶಂಭು ಸಾಲಮನಿ, ಇಮ್ರಾನ್ ಯಲಿಗಾರ ಸೇರಿದಂತೆ ಅನೇಕ ಮಹಾನಗರ ಪಾಲಿಕೆ ಸದಸ್ಯರು, ನೀರು ಸರಬರಾಜು ನೌಕರರು ಹೋರಾಟಕ್ಕೆ ಬೆಂಬಲ ನೀಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಒಂದು ಗಂಟೆಗಳ ಕಾಲ ಶವವಿಟ್ಟು ಪ್ರತಿಭಟನೆ ನಡೆಸಿದ ನಂತರ
ಪ್ರತಿಭಟನಾಕಾರರ ಮನವೋಲಿಸಿದ ಮೇಯರ್ ಈರೇಶ ಅಂಚಟಗೇರಿ ಮತ್ತು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಕೊನೆಗೆ ಕಂಪನಿಯಿಂದ ಮೃತನ ಕುಂಟುಬಕ್ಕೆ ಎರಡೂವರೆ ಲಕ್ಷ ರೂ. ಪರಿಹಾರ ಹಾಗೂ ಪತ್ನಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದರು.
ಅಲ್ಲದೆ, ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದು ಮೃತನ ಶವವನ್ನು ಮುಂದಿನ ಕ್ರಿಯೆಗೆ ಕೊಂಡೊಯ್ಯಲಾಯಿತು.