ಧಾರವಾಡ prajakiran.com : ಜಲಮಂಡಳಿಯಲ್ಲಿ ಇದುವರೆಗೆ ದುಡಿಯುತ್ತಾ ಬಂದ ಆರು ನೂರಕ್ಕೂ ಅಧಿಕ ಜನರನ್ನು ಏಕಾಏಕಿ ಬೀದಿಗೆ ತಂದು ಖಾಸಗಿ ಕಂಪೆನಿ L&T ಗೆ ಗುತ್ತಿಗೆ ನೀಡಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಧೋರಣೆ ಖಂಡಿಸಿ
ನಾಳೆ ಮೇ. 1ರಂದು ಧಾರವಾಡದ ವಾಟರ್ ಬೋರ್ಡ್ ,ಡಿ.ಸಿ ಕಚೇರಿಯಿಂದ ಹುಬ್ಬಳ್ಳಿಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮನೆಯವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ವಿವರಿಸಿದರು.
ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಜಲಮಂಡಳಿ ಖಾಸಗೀಕರಣವನ್ನು ವಿರೋಧಿಸುತ್ತಾ, ನೊಂದ ಕಾರ್ಮಿಕರ ಬದುಕನ್ನು ಬೀದಿಗೆ ತಂದಿರುವ ಸರ್ಕಾರದ ನಡೆಯನ್ನು ಖಂಡಿಸಿದರು.
ಕಾರ್ಮಿಕರಿಗೆ ನ್ಯಾಯ ದೊರಕಿಸಲು ಪ್ರತಿಭಟನೆ ನಡೆಸಿ ಹುಬ್ಬಳ್ಳಿಯಲ್ಲಿರುವ ಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟನೆ ಮಾಡುತ್ತೆವೆ ಎಂದು ಎಚ್ಚರಿಸಿದರು.
ಒಂದೊಂದಾಗಿ ದೇಶದ ಆಸ್ತಿಗಳನ್ನು ಹರಾಜು ಮಾಡುತ್ತಿರುವ ಭಾಜಪಾ ಸರ್ಕಾರ ಈಗ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಜಲಮಂಡಳಿ ನಿರ್ವಹಣೆಯನ್ನು ಖಾಸಗಿ ಕಂಪೆನಿಗೆ ಮಾರಾಟ ಮಾಡಿದೆ.
ಜನ ವಿರೋಧಿಯಾಗಿರುವ ಈ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿರುವುದು ಹೊಸದೇನಲ್ಲ.ಹೈಕೋರ್ಟಿನ ತೀರ್ಪನ್ನು ಉಲ್ಲಂಘಿಸಿ ಹೊಸ ಹೊಸ ನಾಟಕಗಳನ್ನು ಶುರು ಮಾಡಿರುವ ಈ ಸರ್ಕಾರ ಮತ್ತು ವಿಶೇಷವಾಗಿ ಹುಬ್ಬಳ್ಳಿಯ ಜನಪ್ರತಿನಿಧಿಗಳಿಗೆ ಕಾರ್ಮಿಕರ ಕುಟುಂಬಗಳ ಶಾಪ ತಟ್ಟದೇ ಇರದು.
ಕಾರ್ಮಿಕರ ಕಷ್ಟ ಕಾಲದಲ್ಲಿ ನಾವು ಅವರ ಜೊತೆಗೆ ನಿಲ್ಲದಿದ್ದರೆ ನಮಗೆ ನಾವೇ ಆತ್ಮವಂಚನೆ ಮಾಡಿಕೊಂಡಂತೆ ಹಾಗಾಗಿ ನಾವು ನಮಗೆ ನೀರು ಕೊಟ್ಟವರ ಋಣ ತೀರಿಸಲು ಬೀದಿಗೆ ಇಳಿಯುತ್ತಿದ್ದೇವೆ ಎಂದು ಹೇಳಿದರು.
ಪಾಲಿಕೆ ಜಲಮಂಡಳಿಯ ನಿರ್ವಹಣೆಯನ್ನು ಎಲ್ ಎಂಡ್ ಟಿ ಕಂಪೆನಿಗೆ ನೀಡಿ ಇದುವರೆಗೆ ದುಡಿಯುತ್ತಿದ್ದ ನೌಕರರಿಗೆ ಅನ್ಯಾಯವೆಸಗಿದ ಸರ್ಕಾರದ ನಡೆಯಿಂದ
ಸುಮಾರು ಆರುನೂರು ನೌಕರರು ನೌಕರಿ ಕಳೆದುಕೊಂಡು ಬೀದಿಪಾಲಾಗುತ್ತಿದ್ದಾರೆ.
ಮಹಾನಗರ ಪಾಲಿಕೆಯವರು ತಾತ್ಕಾಲಿಕ ಹುದ್ದೆಯಲ್ಲಿರುವವರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಎಂಬ ವರ್ತನೆ ಬೇಡ.
ಪ್ರತಿಯೊಬ್ಬ ನೌಕರರ ಹಿತರಕ್ಷಣೆ ಪಾಲಿಕೆಯ ಜವಾಬ್ದಾರಿ. ನ್ಯಾಯಾಲಯದ ಆದೇಶದಂತೆ ಟೆಂಡರ್ ನೀಡುವಾಗ ಕಾರ್ಮಿಕರ ಸಮೇತ ಕೆಲಸವನ್ನು ಕಂಪೆನಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ಜನರ ಹಿತದೃಷ್ಟಿಯಿಂದ ಒಂದು ಉತ್ತಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕೆಂದು ದೀಪಕ ಚಿಂಚೋರೆ ಒತ್ತಾಯಿಸಿದರು.