ಬಾಗಲಕೋಟೆ prajakiran.com : ರಾಜ್ಯದಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ರಾಜ್ಯದ 25 ಬಿಜೆಪಿ ಸಂಸದರು ಪ್ರಧಾನಿ ಬಳಿ ಹೋಗಿ ರಾಜ್ಯಕ್ಕೆ ಹೆಚ್ಚಿನ ನೆರವು ಕೊಡಿಸುವ ಧೈರ್ಯ ಮಾಡಲಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್. ಪಾಟೀಲ್ ಟ್ವೀಟ್ ಮಾಡಿದ್ದಾರೆ.
ನಿಮ್ಮನ್ನು ಆರಿಸಿ ಕಳುಹಿಸಿರುವ ಜನರಿಗಾಗಿ ಒಂದು ಸಾರಿಯಾದರು ಪ್ರಧಾನಿ ಮುಂದೆ ಬಿಜೆಪಿ ಸಂಸದರೆ ಧ್ವನಿಎತ್ತಿ ಎಂದು ಕುಟುಕಿದ್ದಾರೆ.
ಕಳೆದ ವರ್ಷದ ಪ್ರವಾಹದಿಂದ ನಲುಗಿರುವ ಉತ್ತರ ಕರ್ನಾಟಕದ ಜನರಿಗೂ ಇನ್ನೂ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಮನೆ ಕಳೆದುಕೊಂಡ ಜನರು ಇನ್ನೂ ಶೆಡ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ಸೂರು ಕಲ್ಪಿಸಲು ಕೇಂದ್ರದಿಂದ ಹೆಚ್ಚಿನ ಅನುದಾನಕ್ಕೆ ಪ್ರಧಾನಿ ಮುಂದೆ ಬಿಜೆಪಿ ಸಂಸದರೆ ಧ್ವನಿಎತ್ತಿ ಎಂದು ಗುಡುಗಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೆ ಪಕ್ಷದ ಸರ್ಕಾರ ಇದ್ದರೆ, ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದು ಭಾಷಣ ಮಾಡಿದ್ದೀರಿ.
ಈಗ ಎರಡೂ ಕಡೆ ನಿಮ್ಮದೇ ಸರ್ಕಾರವಿದೆ.. ರಾಜ್ಯದ ಕಷ್ಟಕ್ಕೆ ಸ್ಪಂದಿಸಲು ಪ್ರಧಾನಿ ಮುಂದೆ ಬಿಜೆಪಿ ಸಂಸದರೆ ಧ್ವನಿಎತ್ತಿ ಎಂದು ಛೇಡಿಸಿದ್ದಾರೆ.
ಕಳೆದ ಬಾರಿಯೂ ಕೈ ಚೆಲ್ಲಿ ಕುಳಿತಿದ್ದ ರಾಜ್ಯದ ಕೇಂದ್ರ ಸಚಿವರು, ಬಿಜೆಪಿ ಸಂಸದರು ಈ ಬಗ್ಗೆ ಈಗಲಾದರೂ ಮೌನ ಮುರಿಯುತ್ತಾರಾ ಇಲ್ಲವೇ ಎಂಬುದು ಕಾದು ನೋಡಬೇಕಿದೆ.