ಧಾರವಾಡ prajakiran.com : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಗುರುವಾರದಿಂದ ಆರಂಭಿಸಿರುವ 2020 ರ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಧಾರವಾಡ ಜಿಲ್ಲೆಯಲ್ಲಿ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲೆಯ ಎಲ್ಲಾ 90 ಕೇಂದ್ರಗಳು ಹಾಗೂ 17 ಉಪ ಕೇಂದ್ರಗಳಲ್ಲಿ ಸುಸೂತ್ರವಾಗಿ ಪರೀಕ್ಷೆಗಳು ನಡೆದವು. ದ್ವಿತೀಯ ಭಾಷೆ ಪರೀಕ್ಷೆಗೆ 26,599 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅವರಲ್ಲಿ 25,561 ವಿದ್ಯಾರ್ಥಿಗಳು ಹಾಜರಾದರು.
ಕರೋನಾ ಭಯದಿಂದ ಹಾಗೂ ಇನ್ನಿತರ ಕಾರಣದಿಂದ ಜಿಲ್ಲೆಯಲ್ಲಿ ಮೊದಲ ದಿನದ ಪರೀಕ್ಷೆಗೆ ಸರಿಸುಮಾರು 1038 ಮಕ್ಕಳು ಗೈರು ಹಾಜರಾಗಿದ್ದು ಕಂಡು ಬಂದಿತು.
ಇದೇ ವೇಳೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಶಿಸ್ತುಬದ್ಧವಾಗಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕಂಟೈನಮೆಂಟ್ ಪ್ರದೇಶಗಳಿಂದ ಬಂದ 97 ವಿದ್ಯಾರ್ಥಿಗಳು ಆರೋಗ್ಯವಂತರಾಗಿದ್ದರೂ ಕೂಡ ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕ ಕೊಠಡಿಗಳಲ್ಲಿ ಆಸನ ವ್ಯವಸ್ಥೆ ಕಲ್ಪಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು.
ವಿವಿಧ ಸರಕಾರೇತರ ಸಂಸ್ಥೆಗಳ ನೆರವಿನಿಂದ ಎಲ್ಲಾ ಪರೀಕ್ಷಾ ಕೇಂದ್ರಗಳ ವಿದ್ಯಾರ್ಥಿಗಳಿಗೆ ಬಿಸ್ಕತ್ತು,ಬದಾಮಿ ಹಾಲು ವಿತರಿಸಲಾಯಿತು.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ,ಭಾರತ ಸ್ಕೌಟ್ಸ ಮತ್ತು ಗೈಡ್ಸ್, ಸ್ವಯಂ ಸೇವಕರು, ನೆರವಿನೊಂದಿಗೆ ಮಕ್ಕಳ ಆರೋಗ್ಯ ತಪಾಸಣೆ ಸ್ಯಾನಿಟೈಸರ್ ಬಳಕೆ, ಕಡ್ಡಾಯವಾಗಿ ನಡೆಯಿತು.
ಅಚ್ಚುಕಟ್ಟಾದ ಸಾರಿಗೆ ವ್ಯವಸ್ಥೆ :
ವಿವಿಧ ಗ್ರಾಮೀಣ ಪ್ರದೇಶಗಳಿಂದ ಆಗಮಿಸುವ ಮಕ್ಕಳಿಗಾಗಿ ವಾ.ಕ.ರ.ಸಾ.ಸಂಸ್ಥೆಯು 200 ಮಾರ್ಗಗಳು ಉಚಿತ ಬಸ್ ಸೌಕರ್ಯ ಕಲ್ಪಿಸಿತು. ಶಿಕ್ಷಣ ಇಲಾಖೆಯು ಮಾರ್ಗ ಅಧಿಕಾರಿಗಳನ್ನು ನೇಮಿಸಲಾಗಿತ್ತು, ಎಲ್ಲಾ ಮಕ್ಕಳಿಗೂ ಸಮರ್ಪಕ ಮಾಹಿತಿ ನೀಡಿ ಪರೀಕ್ಷೆಗೆ ಹಾಜರಾಗುವಂತೆ ಪ್ರೋತ್ಸಾಹಿಸಿ ಕರೆತಂದಿದ್ದು ವಿಶೇಷವಾಗಿತ್ತು.
ಜೂನ್ 27, ಶನಿವಾರ ಗಣಿತ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾ ನೋಡಲ್ ಅಧಿಕಾರಿ ಡಾ.ಪೂರ್ಣಿಮಾ ಮುಕ್ಕುಂದಿ ತಿಳಿಸಿದ್ದಾರೆ.