ಶಿವಮೊಗ್ಗ prajakiran.com : ನಾಡಿನ ಸುಪ್ರಸಿದ್ಧ ಯಾತ್ರಾ ಹಾಗೂ ಪವಿತ್ರ ಸ್ಥಳವಾದ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯವನ್ನು ಮಹಾಮಾರಿ ಕೋವಿಡ್- ೧೯ ನ ಕಾರಣದಿಂದಾಗಿ ಮಾ. ೨೨ ರಂದು ಸರ್ಕಾರದ ಆದೇಶ ಮೇರೆಗೆ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ದೇವಿಯ ದರ್ಶನ ಹಾಗೂ ಪೂಜೆಯನ್ನು ನಿಲ್ಲಿಸಲಾಗಿತ್ತು.
ನಂತರದ ದಿನಗಳಲ್ಲಿ ಸರ್ಕಾರವು ಲಾಕ್ಡೌನ್ ತೆರವುಗೊಳಿಸಿ ಎಲ್ಲಾ ದೇವಸ್ಥಾನ ಹಾಗೂ ಮಠ ಮಂದಿರಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಿತ್ತು.
ಆದರೆ ಸಾರ್ವಜನಿಕ ಹಿತದೃಷ್ಠಿ ಹಾಗೂ ಸ್ಥಳೀಯ ಆಡಳಿತದ ಸಲಹೆಯ ಮೇರೆಗೆ ಲಾಂಚ್ನಲ್ಲಿ ಅಂತರ ಕಾಯ್ದುಕೊಳ್ಳುವುದು ಅಸಾಧ್ಯ ಹಾಗೂ ಈ ಹಳ್ಳಿ ನಾಡಿನ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಇಲ್ಲಿಯವರೆಗೆ ದೇವಿಯ ದರ್ಶನವನ್ನು ನಿಲ್ಲಿಸಲಾಗಿತ್ತು.
ಆದರೆ ಈಗ ಅನೇಕ ಭಕ್ತಾಧಿಗಳ ಒತ್ತಾಯದ ಮೇರೆಗೆ ಹಾಗೂ ಪ್ರವಾಸಿಗರ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಂದವರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಲಾಂಚಿನಲ್ಲಿ ಪ್ರಯಾಣಿಸುವವರು ಲಾಂಚಿನ ಸಿಬ್ಬಂದಿಗಳ ಸಲಹೆ ಪಡೆದು ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ದೇವಿಯ ದರ್ಶನವನ್ನು ಪಡೆಯಬೇಕೆಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿರುತ್ತಾರೆ.