ಬೆಂಗಳೂರು ಪ್ರಜಾಕಿರಣ. ಕಾಮ್ : ನಾಡಿನ ಜನತೆಗೆ ಚುನಾವಣಾ ಪೂರ್ವದಲ್ಲಿ ನಾವು ನೀಡಿದ್ದ ಭರವಸೆಯಂತೆ ಬಡಕುಟುಂಬದ ಪ್ರತೀ ವ್ಯಕ್ತಿಗೆ ತಲಾ 10 ಕೆ.ಜಿ ಅಕ್ಕಿಯನ್ನು ನೀಡಲು ಶಕ್ತಿಮೀರಿ ಪ್ರಯತ್ನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಆದರೆ, ಬಿಜೆಪಿಯವರ ಕುತಂತ್ರ ನೀತಿಯಿಂದಾಗಿ ಎಫ್.ಸಿ.ಐ ನವರು ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿದರು.
ಆ ನಂತರ ತೆಲಂಗಾಣ, ಆಂದ್ರಪ್ರದೇಶ, ಪಂಜಾಬ್ ಇನ್ನು ಮುಂತಾದ ರಾಜ್ಯಗಳನ್ನು ಸಂಪರ್ಕಿಸಿ ಅಕ್ಕಿಯನ್ನು ಖರೀದಿಸಲು ನಾವು ನಡೆಸಿದ ಪ್ರಯತ್ನ ಕೈಗೂಡಲಿಲ್ಲ ಎಂದು ವಿವರಿಸಿದ್ದಾರೆ.
ಹೀಗಾಗಿ ಜುಲೈ 1 ರಿಂದ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿ ಅಕ್ಕಿಯ ಬದಲಿಗೆ ಹಣ ನೀಡಲು ನಿರ್ಧರಿಸಿದ್ದೇವೆ.
ಈ ಹಣದಲ್ಲಿ ಫಲಾನುಭವಿಗಳು ತಮ್ಮ ಕುಟುಂಬಕ್ಕೆ ಬೇಕಿರುವ ಆಹಾರ ಧಾನ್ಯವನ್ನು ಖರೀದಿಸಬಹುದಾಗಿದೆ ಎಂದು ವಿವರಿಸಿದರು.
ಅಕ್ಕಿ ಕೊರತೆಯಿಂದಾಗಿ ಯೋಜನೆಯಡಿ ಬರುವ ಪ್ರತಿ ಪಡಿತರದಾರರಿಗೆ ತಲಾ 10 ಕೆ.ಜಿ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.
ಒಂದು ಕೆ.ಜಿ ಅಕ್ಕಿಗೆ 34 ರೂ. ನಿಗದಿ ಮಾಡಲಾಗಿದೆ. ಪಡಿತರದಾರರಿಗೆ ತಲಾ ಐದು ಕೆ.ಜಿ ಅಕ್ಕಿ ನೀಡಲಾಗುತ್ತದೆ.
ಉಳಿದ ಐದು ಕೆ.ಜಿ ಅಕ್ಕಿಯ ಬದಲಿಗೆ, ಪ್ರತಿ ಕೆ.ಜಿಗೆ 34 ರೂ.ನಂತೆ ಹಣ ನೀಡುತ್ತೇವೆ” ಎಂದು ವಿವರಿಸಿದರು.
“ಹಣ ನೀಡುವ ವ್ಯವಸ್ಥೆಯು ಅಕ್ಕಿ ಸಂಗ್ರಹವಾಗುವವರೆಗೂ ಮಾತ್ರ ಚಾಲ್ತಿಯಲ್ಲಿರುತ್ತದೆ.
ಅಗತ್ಯವಿರುವಷ್ಟು ಅಕ್ಕಿ ಸಿಕ್ಕ ಬಳಿಕ ಹಣ ನೀಡುವುದನ್ನು ನಿಲ್ಲಿಸಿ, ಅಕ್ಕಿಯನ್ನೇ ನೀಡುತ್ತೇವೆ” ಎಂದು ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟಪಡಿಸಿದರು.