ಧಾರವಾಡ prajakiran. com : ಪಿಎಸ್ಐ ನೇಮಕಾತಿಯಲ್ಲಿ ಸಂಪುಟ ದರ್ಜೆ ಸಚಿವರು ಅವ್ಯವಹಾರ ಎಸಗಿರುವ ಸಾಧ್ಯತೆಯಿದೆ.
ಆದ್ದರಿಂದ ಇಡೀ ಪ್ರಕರಣ ಸತ್ಯಾಸತ್ಯತೆ ಹೊರಬರಲು ನ್ಯಾಯಾಂಗ ತನಿಖೆ ನಡೆಸಬೇಕು ಎಂದು
ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಖಿತ ಪರೀಕ್ಷೆಯಿಂದ ಒಟ್ಟು ಆರು ಹಂತಗಳಲ್ಲಿ ನಡೆದಿದೆ.
ಸಿಐಡಿ ಈಗಾಗಲೇ 25 ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.
ಆದರೆ, ಸಚಿವರು ಮಾತ್ರವಲ್ಲದೇ ಮುಖ್ಯಮಂತ್ರಿ ಕಚೇರಿ ಶಾಮೀಲಾಗಿರುವ ಶಂಕೆ ಇದೆ.
ಪ್ರಾಥಮಿಕ ಹಂತದಲ್ಲಿ ತನಿಖೆ ಪಾರದರ್ಶಕತೆ ಕಾಣಿಸುತ್ತಿದೆ. ಆದರೆ, ವಾಸ್ತವವಾಗಿ ಪಾರದರ್ಶಕ ತನಿಖೆ ನಡೆಯುತ್ತಿಲ್ಲ.
ಗೃಹ ಸಚಿವರು, ಇತರ ಸಚಿವರು ಮಾತ್ರವಲ್ಲದೇ ಅನೇಕ ಶಾಸಕರು ಭಾಗಿಯಾಗಿದ್ದಾರೆ.
ಅವ್ಯವಹಾರದಲ್ಲಿ ಸುಮಾರು 353 ಅಭ್ಯರ್ಥಿಗಳಿಂದ ಕೋಟಿಗಟ್ಟಲೆ ಹಣ ಪಡೆಯಲಾಗಿದೆ.
ನೇಮಕಾತಿ ಹಂತದಲ್ಲಿ ಪೊಲೀಸ್ ಇಲಾಖೆಯ ಎಡಿಜಿಪಿ ಶ್ರೇಣಿಯ ಹಿರಿಯ ಅಧಿಕಾರಿಗಳು ಪ್ರಮುಖ ಪಾಲುದಾರರಾಗಿದ್ದು, ಕೂಡಲೇ ಅವರನ್ನು ಅಮಾನತ್ ಮಾಡಬೇಕು.
ಉದ್ಯೋಗ ಇಲ್ಲದೇ ತೊಂದರೆಯಲ್ಲಿರುವ ಯುವ ಸಮುದಾಯದ ಹಿತ ಕಾಯುವುದು ಅಗತ್ಯವಿದೆ. ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ದೃಷ್ಠಿಯಿಂದ ಪ್ರಕರಣದಲ್ಲಿನ ಎಲ್ಲ ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಬೇಕು.
ಸಚಿವ ಡಾ. ಅಶ್ವತ್ಥನಾರಾಯಣ ಅವರ ಸಹೋದರ ಸೇರಿದಂತೆ ಅನೇಕ ಪ್ರಮುಖ ಕುಳಗಳ ಪಾತ್ರವಿದೆ. ಈ ಹಿನ್ನೆಲೆಯಲ್ಲಿ
ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಉಪನ್ಯಾಸಕರು, ಇಂಜನೀಯರ ಇನ್ನಿತರ ಹುದ್ದೆಗಳ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ.
ಹೀಗಾಗಿ ಸರಕಾರ ಪಾರದರ್ಶಕ ಮತ್ತು ಜನಪರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ನ್ಯಾಯವಾದಿ
ರಾಜು ಮಸವಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.