ಧಾರವಾಡ prajakiran.com : ದೇಶದ ಕೋಟ್ಯಾಂತರ ಭಕ್ತರ ಆರಾದ್ಯದೈವವಾಗಿರುವ ತಿರುಪತಿ ತಿಮ್ಮಪ್ಪನ ಆಸ್ತಿಗೆ ಕೈಹಾಕಿದರೆ ನಿಮ್ಮ ತಂದೆಗೆ ಆದ ಪರಿಸ್ಥಿತಿ ನಿಮಗೂ ಬರಬಹುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಅವರು ಬುಧವಾರ ಧಾರವಾಡ ಜಿಲ್ಲಾಧಿಕಾರಿ ಮುಖಾಂತರ ಆಂಧ್ರಪ್ರದೇಶದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ತಿರುಪತಿ ತಿಮ್ಮಪ್ಪನ ದೇವಸ್ಥಾನದ ಆಸ್ತಿ ಮಾರಾಟಕ್ಕೆ ಮುಂದಾಗಿರುವ ಆಂಧ್ರಪ್ರದೇಶ ಸರ್ಕಾರ ತಾತ್ಕಾಲಿಕವಾಗಿ ಅದಕ್ಕೆ ತಾನೇ ತಡೆಯಾಜ್ಞೆ ತಂದುಕೊಂಡಿದೆ. ಮುಂದೊಂದು ದಿನ ಅಲ್ಲಿನ ಸರ್ಕಾರ ಮತ್ತೇ ಆಸ್ತಿ ಮಾರಾಟಕ್ಕೆ ಕೈ ಹಾಕಬಹುದು. ಇದಕ್ಕೆ ಅವಕಾಶ ನೀಡಬಾರದು ಎಂದು ಪ್ರಮೋದ ಮುತಾಲಿಕ ಆಗ್ರಹಿಸಿದರು.
ತಿರುಪತಿ ತಿಮ್ಮಪ್ಪನ ದೇವಸ್ಥಾನದ ಸುಮಾರು 50ಕ್ಕೂ ಹೆಚ್ಚು ಆಸ್ತಿಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
ಇದು ಇಡೀ ಭಕ್ತ ಸಮೂಹಕ್ಕೆ ಹಾಗೂ ಹಿಂದೂ ಧರ್ಮಕ್ಕೆ ಮಾಡುವ ದ್ರೋಹವಾಗಿದೆ. ಈಗ ಭಕ್ತರ, ಸಾಧು ಸಂತರ ಹಾಗೂ ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು ಆ ಪ್ರಕ್ರಿಯೆಗೆ ತಾತ್ಕಾಲಿಕ ತಡೆಯಾಜ್ಞೆ ತಂದುಕೊಂಡಿದೆ.
ಮುಂದಿನ ದಿನಗಳಲ್ಲಿ ಈ ನಿರ್ಧಾರಕ್ಕೆ ಅಲ್ಲಿನ ಸರ್ಕಾರ ಮತ್ತೆ ಮುಂದಾಗಬಹುದು. ಆಗ ಆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.
ಹಿಂದೂ ದೇವಸ್ಥಾನ ಹಾಗೂ ಹಿಂದೂಗಳ ಮೇಲೆಯೇ ಇಂತಹ ಘಟನೆಗಳು ನಡೆಯುತ್ತಿವೆ. ಚರ್ಚಗಳು, ಮದರಸಾ ಹಾಗೂ ವಕ್ಫ ಬೋರ್ಡಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಕೇವಲ ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮುತಾಲಿಕ್ ಕಿಡಿಕಾರಿದರು.
ಸಾಧು, ಸಂತರ ಹಾಗೂ ಭಕ್ತರನ್ನೊಳಗೊಂಡ ಕಮಿಟಿ ರಚನೆ ಮಾಡಿ ತಿಮ್ಮಪ್ಪನ ದೇವಸ್ಥಾನದ ಆಸ್ತಿ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.