ಧಾರವಾಡ ಪ್ರಜಾಕಿರಣ.ಕಾಮ್ ಫೆ.08: ಧಾರವಾಡದ ಶ್ರೀನಗರ ಭಾವಿಕಟ್ಟಿ ಪ್ಲಾಟ ನಿವಾಸಿ ಪರಶುರಾಮ ಘಾಟಗೆ ತನ್ನ ಪತ್ನಿ ಶ್ರೀಮತಿ ಪ್ರೀತಿ ಗರ್ಭವತಿಯಾದ 3ನೇ ತಿಂಗಳಿಂದ 9ನೇ ತಿಂಗಳಿನವರೆಗೆ ಧಾರವಾಡದ ಮಾಳಮಡ್ಡಿಯಲ್ಲಿರುವ ಪ್ರಶಾಂತ ನರ್ಸಿಂಗ್ ಹೋಮ್ ನ ಪ್ರಸೂತಿ ತಜ್ಞೆ ಡಾ: ಸೌಭಾಗ್ಯ ಕುಲಕರ್ಣಿ ಹತ್ತಿರ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆದಿದ್ದರು.
ಪ್ರಸೂತಿ ತಜ್ಞರು ದಿ: 12/07/2018 ರಿಂದ 08/01/2019 ರವರೆಗೆ 5 ಬಾರಿ ಶ್ರೀಮತಿ ಪ್ರೀತಿಗೆ ಸ್ಕ್ಯಾನ್ ಮಾಡಿದ್ದರು.
ಗರ್ಭದಲ್ಲಿನ ಮಗುವಿನ ಬೆಳವಣಿಗೆ ಚೆನ್ನಾಗಿದೆ ಹಾಗೂ ಮಗು ಆರೋಗ್ಯವಾಗಿದೆ ಅಂತಾ ತಿಳಿಸುತ್ತಿದ್ದರು.
ದೂರುದಾರರ ಪತ್ನಿ ತನ್ನ 9ನೇ ತಿಂಗಳಿನಲ್ಲಿ ಅದೇ ವೈದ್ಯರ ಹತ್ತಿರ ತಪಾಸಣೆಗೆ ಹೋದಾಗ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲು ಅವರು ಸಲಹೆ ನೀಡಿದ್ದರು.
ಆದರೆ ಹಣಕಾಸಿನ ತೊಂದರೆಯಿಂದಾಗಿ ದೂರುದಾರ ತನ್ನ ಪತ್ನಿಯ ಹೆರಿಗೆಯನ್ನು ಧಾರವಾಡ ಎಸ್.ಡಿ.ಎಮ್. ಆಸ್ಪತ್ರೆಯಲ್ಲಿ ದಿ:31/01/2019 ರಂದು ಮಾಡಿಸಿದರು.
ಆಗ ಹೆಣ್ಣು ಮಗು ಜನಿಸಿದ್ದು ಅದರ ಎರಡು ಕಾಲುಗಳು ಅಂಗವಿಕಲತೆಯಿಂದ ಕೂಡಿದ್ದವು.
ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಪ್ರಕಾರ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ ನಿಯಮಾವಳಿ ಪ್ರಕಾರ ಗರ್ಭಧಾರಣೆಯ 18-20 ವಾರಗಳ ಸ್ಕ್ಯಾನಿಂಗ್ನಲ್ಲಿ ಮಗುವಿನ ಆರೋಗ್ಯ, ಅದರ ಅಂಗಾಂಗಗಳು ಸರಿಯಾಗಿ ಇವೆಯೋ ಅಥವಾ ಇಲ್ಲವೋ ಅನ್ನುವ ಬಗ್ಗೆ ತಪಾಸಣೆ ಮಾಡಿದ ವೈದ್ಯರಿಗೆ ಗೊತ್ತಾಗುತ್ತ್ತದೆ.
ಆದರೆ ದಿ:12/07/2018 ರಿಂದ ದಿ:08/01/2019ರವರೆಗೆ 20 ವಾರಗಳಿಂದ 36 ವಾರಗಳ ಶ್ರೀಮತಿ ಪ್ರೀತಿಯ ಸ್ಕ್ಯಾನಿಂಗನ್ನು ಎದುರುದಾರ ಪ್ರಸೂತಿ ತಜ್ಞರು ತೆಗೆದು ನೋಡಿದಾಗ ಅವರಿಗೆ ಮಗುವಿನ ಅಂಗವಿಕಲತೆ ಬಗ್ಗೆ ಗೊತ್ತಿದ್ದರೂ ಆ ವಿಷಯವನ್ನು ದೂರುದಾರರಿಗೆ ತಿಳಿಸದೇ ಮೋಸ ಮಾಡಿ ವೈದ್ಯಕೀಯ ನಿರ್ಲಕ್ಷ ತೋರಿ ತಮಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಆ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಪ್ರಸೂತಿ ತಜ್ಞರು ಕಾಲಕಾಲಕ್ಕೆ ದೂರುದಾರರ ಪತ್ನಿಯ ಸ್ಕ್ಯಾನಿಂಗ್ ತೆಗೆದು ತಪಾಸಣೆ ಮಾಡಿದಾಗ ಅವರಿಗೆ ಗರ್ಭದಲ್ಲಿರುವ ಶಿಶುವಿನ ಅಂಗವಿಕಲತೆ ಗೊತ್ತಾಗುತ್ತದೆ.
ಎಮ್.ಟಿ.ಪಿ.ಕಾಯ್ದೆ ಪ್ರಕಾರ 20 ವಾರಗಳ ಗರ್ಭದ ಸಮಯದಲ್ಲಿ ಶಿಶುವಿನ ಅಂಗವಿಕಲತೆಯ ಬಗ್ಗೆ ವೈದ್ಯರಿಗೆ ತಿಳಿದಿದ್ದು ಆ ಸಂಗತಿಯನ್ನು ಅವರು ದೂರುದಾರರ ಗಮನಕ್ಕೆ ತಂದಿದ್ದರೆ ಅವರು ಕಾನೂನಿನ ಪ್ರಕಾರ ಅಂಗವಿಕಲ ಮಗುವನ್ನು ಗರ್ಭದಲ್ಲಿ ಉಳಿಸಿಕೊಳ್ಳಬೇಕೋ ಅಥವಾ ಬೇಡವೋ ಅನ್ನುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಿದ್ದರು.
ಆದರೆ ಶಿಶುವಿನ ಅಂಗವಿಕಲತೆಯ ಮಹತ್ವದ ಸಂಗತಿಯನ್ನು ತಜ್ಞ ವೈದ್ಯಯಾದ ಎದುರುದಾರರು ದೂರುದಾರರಿಗೆ ತಿಳಿಸದೆ ಅವರು ತಮ್ಮ ವೈದ್ಯಕೀಯ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷತೆ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಅಭಿಪ್ರಯಾಪಟ್ಟಿದೆ.
ವೈದ್ಯರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಸರ್ವೋಚ್ಚ ನ್ಯಾಯಾಲಯ ಮತ್ತು ರಾಷ್ಟ್ರೀಯ ಗ್ರಾಹಕರ ಆಯೋಗದ ತೀರ್ಪುಗಳನ್ನು ಆಧರಿಸಿ ಜಿಲ್ಲಾಗ್ರಾಹಕರ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಎದುರುದಾರರ ನಿರ್ಲಕ್ಷತನದಿಂದ ಜನಿಸಿರುವ ಅಂಗವಿಕಲ ಹೆಣ್ಣು ಮಗುವಿನ ಈವರೆಗಿನ ಚಿಕಿತ್ಸೆ ಹಾಗೂ ಭವಿಷ್ಯದ ಚಿಕಿತ್ಸೆ ಮತ್ತು ಅದರ ಭವಿಷ್ಯದ ಜೀವನ ನಿರ್ವಹಣೆಯ ಬಗ್ಗೆ ಆಯೋಗ ತನ್ನತೀರ್ಪಿನಲ್ಲಿ ಚಿಂತಿಸಿ ಜನಿಸಿದ ಹೆಣ್ಣು ಮಗುವಿನ ಈವರೆಗಿನ ವೈಧ್ಯಕೀಯ ಖರ್ಚಿಗೆ ರೂ.50,000/-, ದೂರುದಾರರ ಓಡಾಟ ಮತ್ತು ಖರ್ಚು ವೆಚ್ಚಕ್ಕೆ ರೂ.50,000/-, ಅಂಗವಿಕಲ ಮಗುವಿನ ಪಾಲಕರಿಗೆ ಆಗಿರುವ ಮಾನಸಿಕ ನೋವು ಮತ್ತು ಹಿಂಸೆಗಾಗಿ ರೂ.2,00,000/- ಹಾಗೂ ಅಂಗವಿಕಲ ಹೆಣ್ಣುಮಗುವಿನ ಭವಿಷ್ಯದ ವೈಧ್ಯಕೀಯ ಖರ್ಚುವೆಚ್ಚಕ್ಕಾಗಿ ರೂ.3,00,000/- ಹಾಗೂ ಸದರಿ ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯದಜೀವನ ನಿರ್ವಹಣೆಗಾಗಿ ರೂ.5,00,000/- ಮತ್ತು ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ಸೇರಿಒಟ್ಟು ರೂ.11,10,000/- ಪರಿಹಾರವನ್ನು ಈ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡುವಂತೆ ತಪ್ಪಿದ್ದಲ್ಲಿ ಅ ಮೊತ್ತದ ಮೇಲೆ ಶೇ.8% ರಂತೆ ಬಡ್ಡಿ ಕೊಡುವಂತೆ ಎದುರುದಾರ ತಜ್ಞ ವೈದ್ಯರಿಗೆ ಆಯೋಗ ಆದೇಶಿಸಿದೆ.
ಸದರಿ ರೂ.11,10,000/- ಪರಿಹಾರದಲ್ಲಿ ರೂ.8,00,000/- ಹಣವನ್ನು ಅಲ್ಪವಯಿ ಅಂಗವಿಕಲ ಹೆಣ್ಣು ಮಗುವಿನ ಹೆಸರಿನಲ್ಲಿ ಅವಳು ವಯಸ್ಕಳಾಗುವವರೆಗೆ ದೂರುದಾರರು ಇಚ್ಚಿಸುವ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾಯಂ ಠೇವಣಿ ಇಡಲು ಮತ್ತು ಪರಿಹಾರದ ಪೂರ್ತಿ ಹಣವನ್ನು ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಖರ್ಚು ಮಾಡಲು ಆಯೋಗ ತಿಳಿಸಿದೆ.