ಮಾ. 12 ರ ಕೋವಿಡ್ ಮಾರ್ಗಸೂಚಿಗಳನ್ವಯ ಜನ ಭಾಗವಹಿಸುವಿಕೆಗೆ ಮಿತಿ
ಧಾರವಾಡ prajakiran.com : ಕೋವಿಡ್-19 ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸಭೆ, ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ರಾಜ್ಯ ಸರ್ಕಾರ ಮಾ.12 ರಂದು ಹೊರಡಿಸಿದ್ದ ಮಾರ್ಗಸೂಚಿಗಳನ್ನು ನಿನ್ನೆ (ಏ.2) ದಿನ ಹೊರಡಿಸಿರುವ ಹೊಸ ಮಾರ್ಗಸೂಚಿಗಳೊಂದಿಗೆ ಮುಂದುವರೆಸಿದೆ.
ಮಾ.12 ರ ಮಾರ್ಗಸೂಚಿಗಳನ್ವಯ ಸಾಮಾಜಿಕ ಆಚರಣೆ ಮತ್ತು ಸಮಾರಂಭಗಳಾದ ಮದುವೆ, ಧಾರ್ಮಿಕ ಆಚರಣೆ, ಸಮಾರಂಭ ಹಾಗೂ ರಾಜಕೀಯ ಆಚರಣೆ-ಸಮಾರಂಭಗಳಲ್ಲಿ ತೆರೆದ ಪ್ರದೇಶಗಳಾಗಿದ್ದರೆ 500 ಜನ ಮೀರದಂತೆ ಹಾಗೂ ಸಭಾಂಗಣಗಳು, ಹಾಲ್ ಮುಂತಾದ ಮುಚ್ಚಿದ ಪ್ರದೇಶಗಳಾಗಿದ್ದಲ್ಲಿ 200 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಜನ್ಮದಿನ, ನಿಧನ, ಶವಸಂಸ್ಕಾರ ಹಾಗೂ ಅಂತ್ಯಕ್ರಿಯೆ ಮತ್ತು ಇತರ ಸಮಾರಂಭಗಳ ಆಚರಣೆಗೆ ತೆರೆದ ಪ್ರದೇಶವಾಗಿದ್ದರೆ 100 ಜನ ಹಾಗೂ ಸಭಾಂಗಣ, ಹಾಲ್ ಮುಂತಾದ ಮುಚ್ಚಿದ ಪ್ರದೇಶಗಳಾಗಿದ್ದರೆ 50 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಕೋವಿಡ್ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಮಾ.12 ರಂದು ಹೊರಡಿಸಿರುವ ಮಾರ್ಗಸೂಚಿಗಳಲ್ಲಿನ ಈ ಅಂಶಗಳೊಂದಿಗೆ ಹೊಸದಾಗಿ (ಏ.2) ಹೊರಡಿಸಿರುವ ಮಾರ್ಗಸೂಚಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಜಾರಿಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.