ಅಂತಾರಾಷ್ಟ್ರೀಯ

ಧಾರವಾಡ ಲೋಕಸಭಾ ಕ್ಷೇತ್ರ ಏ. 12 ರಿಂದ ನಾಮಪತ್ರ ಸಲ್ಲಿಕೆ

*ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆ-2024*
*ಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ;* *ಏಪ್ರಿಲ್ 19 ನಾಮಪತ್ರ ಸಲ್ಲಿಕೆಗೆ ಕೊನೆಯ* *ದಿನ; ಏಪ್ರಿಲ್ *20 *ನಾಮಪತ್ರ* *ಪರಿಶೀಲನೆ; ಹಿಂಪಡೆಯಲು ಏಪ್ರಿಲ್* *22* *ಕೊನೆಯ* *ದಿನ: 
ಧಾರವಾಡ ಪ್ರಜಾಕಿರಣ.ಕಾಮ್ ಏ. 10 : ಧಾರವಾಡ ಲೋಕ ಸಭಾ ಮತ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಮೇ 7 ರಂದು ಮತದಾನ ಜರುಗಲಿದ್ದು, ಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ನಾಮಪತ್ರ ಸಲ್ಲಿಸಲು ಏಪ್ರಿಲ್ 19 ಕೊನೆಯ ದಿನವಾಗಿದ್ದು, ಏಪ್ರಿಲ್ 20 ರಂದು ನಾಮಪತ್ರ ಪರಿಶೀಲನೆ ಮತ್ತು ಏಪ್ರಿಲ್ 22 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಧಾರವಾಡ ಲೋಕ ಸಭಾ ಮತ ಕ್ಷೇತ್ರದ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು  ಹೇಳಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.

 ಜೂನ್ 04 ರಂದು ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಮತ ಏಣಿಕಾ ಕೇಂದ್ರದಲ್ಲಿ ಮತ ಏಣಿಕೆ ನಡೆಯಲಿದೆ ಎಂದರು.

ಮತಗಟ್ಟೆಗಳ ವಿವರ : ನವಲಗುಂದ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 234, ಕುಂದಗೋಳ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 214, ಧಾರವಾಡ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 234, ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 217, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 260, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 273, ಕಲಘಟಗಿ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 228, ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನ ಸಭಾ ಮತ ಕ್ಷೇತ್ರ ವ್ಯಾಪ್ತಿಯಲ್ಲಿ 241 ಮತಗಟ್ಟೆಗಳಿವೆ. ಒಟ್ಟಾರೆಯಾಗಿ 8 ವಿಧಾನ ಸಭಾ ಮತ ಕ್ಷೇತ್ರದಲ್ಲಿ 1901 ಮತಗಟ್ಟೆಗಳಿವೆ.

ನಾಮ ಪತ್ರ ಸಲ್ಲಿಕೆ ಸಂದರ್ಭದಲ್ಲಿ ಗಮನಿಸುವ ಅಂಶಗಳು: ಚುನಾವಣಾಧಿಕಾರಿಗಳ ಕಚೇರಿ (ಜಿಲ್ಲಾಧಿಕಾರಿಗಳ ಕಚೇರಿ) ಸುತ್ತಮುತ್ತಲು 200 ಮೀ. ವ್ಯಾಪ್ತಿಯಲ್ಲಿ ಗಡಿ ಗುರುತಿಸಿ, 100 ಮೀ. ವ್ಯಾಪ್ತಿಯನ್ನು ನಿರ್ಭಂದಿತ ಪ್ರದೇಶವನ್ನಾಗಿ ಗುರುತಿಸಲಾಗಿದೆ.

100ಮೀ ನಿರ್ಭಂದಿತ ಪ್ರದೇಶದ ವ್ಯಾಪ್ತಿಯೊಳಗಡೆ ನಾಮಪತ್ರ ಸಲ್ಲಿಸಲು ಕೇವಲ 3 ವಾಹನಗಳಿಗೆ ಮಾತ್ರ ಅವಕಾಶವಿದ್ದು, ಅಭ್ಯರ್ಥಿಯ ವಾಹನಗಳು ಕಡ್ಡಾಯವಾಗಿ ಅನುಮತಿ ಪಡೆದ ವಾಹನಗಳಾಗಿರಬೇಕು ಹಾಗೂ ವಾಹನಗಳ ಮೇಲೆ ಅನುಮತಿ ಪತ್ರವನ್ನು ಲಗತ್ತಿಸಿರಬೇಕು.

ಮೂರು ವಾಹನಗಳಿಗೆ ಚುನಾವಣಾಧಿಕಾರಿಗಳ ಕಚೇರಿಯ ಮುಖ್ಯ ದ್ವಾರದ ಗೇಟಿನವರೆಗೆ ಮಾತ್ರ ಪ್ರವೇಶಕ್ಕೆ ಅನುಮತಿಸಲಾಗಿದೆ. ಚುನಾವಣಾಧಿಕಾರಿಗಳ ಕಚೇರಿಯ ಒಳಗಡೆ ಪ್ರವೇಶಿಸಲು ಅಭ್ಯರ್ಥಿಯೊಂದಿಗೆ 4 ಜನರಿಗೆ ಮಾತ್ರ ಅವಕಾಶವಿದೆ.

ಏಪ್ರಿಲ್ 12 ರಿಂದ ಏಪ್ರಿಲ್ 19, 2024 ರವರೆಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗಾಗಿ (ರಜಾದಿನಗಳನ್ನು ಹೊರತುಪಡಿಸಿ) ಅಭ್ಯರ್ಥಿಗಳು ತಮ್ಮ ನಾಮ ಪತ್ರಗಳನ್ನು ಸಲ್ಲಿಸಬಹುದು.

ನಾಮ ಪತ್ರದೊಂದಿಗೆ ಈಗಾಗಲೇ ತಿಳಿಸಿರುವಂತೆ ರಾಜಕೀಯ ಪಕ್ಷಗಳ ಸಭೆ ಜರುಗಿಸಿ, ನಾಮಪತ್ರ ಪ್ರಕ್ರಿಯೆ ಹಾಗೂ ನಮೂನೆ, ದಾಖಲೆ, ಪ್ರತಿಗಳ ಸಂಖ್ಯೆ ಕುರಿತು ಮಾಹಿತಿ ನೀಡಲಾಗಿದೆ. ನಾಮಪತ್ರ ನಮೂನೆ-2ಎ ಎಲ್ಲ ಕಾಲಂಗಳನ್ನು ಭರ್ತಿ ಮಾಡಿ ಅಭ್ಯರ್ಥಿ ಹಾಗೂ ಸೂಚಕರು ಸಹಿ ಮಾಡಿರಬೇಕು.

ಠೇವಣಿ ಮೊತ್ತವು ಸಾಮಾನ್ಯ ವರ್ಗಕ್ಕೆ ರೂ. 25,000 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗಕ್ಕೆ ರೂ. 12,500 ಹಾಗೂ ತಹಶೀಲ್ದಾರರಿಂದ ಪಡೆದ ಇತ್ತೀಚಿನ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚಿನ ನಾಮಪತ್ರ ಸಲ್ಲಿಸಿದಲ್ಲಿ 2ನೇ ಹಾಗೂ ನಂತರದ ನಾಮ ಪತ್ರಗಳಿಗೆ ಈಗಾಗಲೇ ಠೇವಣಿ ಮಾಡಿದ ರಶೀದಿಯ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು.

ಅಭ್ಯರ್ಥಿಯ ಮೊಬೈಲ್ ಸಂಖ್ಯೆ, ವ್ಯಾಟ್ಸಪ್ ಸಂಖ್ಯೆ, ಇ-ಮೇಲ್ ವಿಳಾಸ, ಫೇಸ್ ಬುಕ್, ಟ್ವೀಟರ್, ಇನ್ಸ್ಟಾಗ್ರಾಂ, ಟೆಲಿಗ್ರಾಂ ಹಾಗೂ ಇತ್ಯಾದಿ ಸಾಮಾಜಿಕ ಜಾಲತಾಣಗಳ ವಿವರಗಳನ್ನು ನಿಗಧಿತ ನಮೂನೆಗಳಲ್ಲಿ ಸಲ್ಲಿಸಬೇಕು.

ಯಾವ ಅಭ್ಯರ್ಥಿಯು ತಮ್ಮ ವಿರುದ್ಧದ ಅಪರಾಧ ಪ್ರಕರಣವನ್ನು ಹೊಂದಿರುವನೋ ಅವು ಬಾಕಿ ಪ್ರಕರಣಗಳಾಗಲಿ ಅಥವಾ ಅವರ ಅಭ್ಯರ್ಥಿಯನ್ನು ಅಪರಾಧಿಯೆಂದು ನಿರ್ಣಯಿಸಿದ ಪ್ರಕರಣಗಳಾಗಲಿ ಅಂಥ ಅಭ್ಯರ್ಥಿಗಳು ಮಾನ್ಯ ಭಾರತ ಚುನಾವಣಾ ಆಯೋಗವು ನಿಗದಿಪಡಿಸಿದ ಸಿ-1, ಸಿ-2, ಘೋಷಣೆಯನ್ನು ಪ್ರಕಟಿಸಬೇಕಾಗುತ್ತದೆ ಹಾಗೂ ಸಿ-4 ರಲ್ಲಿ ವರದಿಯನ್ನು ಸಲ್ಲಿಸಬೇಕು

ಅಂತಹ ಅಪರಾಧಗಳ ಪ್ರಕಟಣೆಗಳನ್ನು, ನಾಮಪತ್ರವನ್ನು ಹಿಂತೆಗೆದುಕೊಳ್ಳುವ ಮೊದಲ 4 ದಿನಗಳೊಳಗೆ, ಮುಂದಿನ 5 ರಿಂದ 8 ದಿನಗಳೊಳಗೆ, 9ನೇ ದಿನದಿಂದ ಪ್ರಚಾರದ ಕೊನೆಯ ದಿನದವರೆಗೆ (ಮತದಾನದ ದಿನಕ್ಕೆ ಮುಂಚಿನ 2ನೇ ದಿನ) ಮೂರು ಹಂತಗಳಲ್ಲಿ ಪ್ರಕಟಿಸಿ ವರದಿ ಸಲ್ಲಿಸಬೇಕೆಂದು ಅವರು ಹೇಳಿದರು.

ಪ್ರಸ್ತುತ ಚುನಾವಣೆಯಲ್ಲಿ ಮತದಾನದ ದಿನದಂದು ಒಟ್ಟು ಪಿಆರ್‍ಓ- 2195, ಎಪಿಆರ್‍ಓ- 2195 ಮತ್ತು ಪಿಓ-4392 ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಲ್ಲಿದ್ದು ಅಕ್ರಮ ವಹಿವಾಟು ತಡೆಯಲು ವಿವಿಧ ತಂಡಗಳನ್ನು ನೇಮಿಸಲಾಗಿದೆ.

ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ವಿಧಾನ ಸಭಾ ಕ್ಷೇತ್ರವಾರು ಮಾದರಿ ನೀತಿ ಸಂಹಿತೆ ನೂಡಲ್ ಅಧಿಕಾರಿಗಳು 8, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು 57, ಸ್ಟ್ಯಾಟಿಕ್ ಸರ್ವೇಲೆನ್ಸ್ ಟೀಮ್ ಅಧಿಕಾರಿಗಳು 72, ವಿಡಿಯೋ ಸರ್ವೇಲೆನ್ಸ್ ಟೀಮ್ ಅಧಿಕಾರಿಗಳು 14, ವಿಡಿಯೋ ವೀವಿಂಗ್ ಟೀಮ್ ಅಧಿಕಾರಿಗಳು 21, ಅಕೌಂಟಿಂಗ್ ಟೀಮ್ ಅಧಿಕಾರಿಗಳು 11, ಸಹಾಯಕ ಲೆಕ್ಕ ವೀಕ್ಷಕರು 10 ಸೇರಿ ಒಟ್ಟು 193 ಅಧಿಕಾರಿಗಳನ್ನು ವಿವಿಧ ತಂಡಗಳಿಗೆ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

*ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಜಪ್ತು ಮಾಡಲಾದ ಸಾಮಗ್ರಿಗಳ ವಿವರ:* ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿಯಲ್ಲಿ ಒಟ್ಟು 0.778 ಕೆ.ಜಿ. ಚಿನ್ನ (ಮೌಲ್ಯ ರೂ:38,50,000), ನಗದು 24,58,970, ಡ್ರಗ್ಸ್ (ಮಾದಕ ವಸ್ತುಗಳು) 7.727 (ಮೌಲ್ಯ ರೂ:8,19,130), ಲಿಕ್ಕರ್ 10166.02 ಲೀಟರ್ (ಮೌಲ್ಯ ರೂ:29,14,562), ಇತರೆ ಮತ್ತು ಉಚಿತ ಸಾಮಗ್ರಿಗಳು: 2179 ಸೀರೆಗಳು (ಮೌಲ್ಯ ರೂ:17,82,940), 1344 ಜಿನ್ಸ್ ಪ್ಯಾಂಟ್ಸ್ (ಮೌಲ್ಯ ರೂ:3,37,100), 480 ಮಿಕ್ಸರ್ಸ್ (ಮೌಲ್ಯ ರೂ:8,00,000), 715 ತಲೆ ದಿಂಬುಗಳು (ಮೌಲ್ಯ ರೂ:35,750), 37 ಬೆಡ್ ಶೀಟ್ಸ್ (ಮೌಲ್ಯ ರೂ:7,400), 22 ಕರ್ಟನ್ಸ್ (ಮೌಲ್ಯ ರೂ:2,200), 14 ವೆಲ್ಸ್ (ಮೌಲ್ಯ ರೂ:4,200), 13 ಕಾರ್ಟನ ಟವೆಲ್ (ಮೌಲ್ಯ ರೂ:1,300), 6 ಶರ್ಟ ಪೀಸ್ (ಮೌಲ್ಯ ರೂ:4800), 1 ಬ್ಲ್ಯಾಂಕೇಟ್ (ಮೌಲ್ಯ ರೂ:2,000), 20 ಚೂಡಿದಾರ (ಮೌಲ್ಯ ರೂ:30,000), ಒಟ್ಟಾರೆಯಾಗಿ ಜಿಲ್ಲೆಯಲ್ಲಿ 1,30,50,352 ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಹಣದ ಪೈಕಿ ಒಟ್ಟು ರೂ. 4,55,670/- ಗಳನ್ನು ಕ್ಯಾಶ್ ರೆಡ್ರೆಸುಲ್ ಕಮೀಟಿಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

*ದಾಖಲಾದ ಪ್ರಕರಣಗಳ ವಿವರ:* ಕಂಪೊಲ್ 22 ಪ್ರಕರಣಗಳು, ಎಸ್‍ಪಿ 33 ಪ್ರಕರಣಗಳು, ಎಸ್.ಎಸ್.ಟಿ 11 ಪ್ರಕರಣಗಳು, ಎಫ್.ಎಸ್.ಟಿ 01 ಪ್ರಕರಣ ಒಟ್ಟು 67 ಪ್ರಕರಣಗಳನ್ನು ಎಫ್.ಐ.ಆರ್. ಮಾಡಲಾಗಿದ್ದು. ಹಾಗೂ 264 ಅಬಕಾರಿ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆಯಾಗಿ ಜಿಲ್ಲೆಯಲ್ಲಿ 331 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದರು.

ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾನ್ಯ ಚುನಾವಣಾ ಆಯೋಗದ ನಿರ್ದೇಶನಗಳಂತೆ ವಿಶೇಷ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಸಖಿ, ಯುವ ಹಾಗೂ ಥೀಮ್ ಆಧಾರಿತ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಸಲ ಲೋಕಸಭೆ ಚುನಾವಣೆಯಲ್ಲಿ ಶೇ. 75 ರಷ್ಟು ಮತದಾನ ಮಾಡಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *