ಧಾರವಾಡ Prajakiran.com : ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳ ಪೈಕಿ ಒಂದಾಗಿರುವ ಧಾರವಾಡ ಮುರುಘಾಮಠದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವ ಭಕ್ತಿ ಭಾವದಿಂದ ಜರುಗಿತು.
ಕೊರೊನಾದಿಂದಾಗಿ ಕಳೆದ ಒಂದು ವರ್ಷದಿಂದ ನಾಡಿನ ಎಲ್ಲ ಜಾತ್ರಾ ಮಹೋತ್ಸವಗಳು ತಮ್ಮ ಕಳೆ ಕಳೆದುಕೊಂಡಿದ್ದವು.
ಇದೀಗ ಕೊರೊನಾ ಹಾವಳಿ ಕಡಿಮೆಯಾಗಿರುವುದರಿಂದ ಸರ್ಕಾರವು ಕೂಡ ಜಾತ್ರೆಗಳನ್ನು ನಡೆಸಲು ಪರವಾನಿಗಿ ನೀಡಿದೆ.
ಅದರಂತೆ ಸರ್ಕಾರ ಪರವಾನಿಗೆ ನೀಡಿದ ನಂತರ ಧಾರವಾಡದ ಪ್ರಸಿದ್ಧ ಜಾತ್ರಾ ಮಹೋತ್ಸವ ಮಂಗಳವಾರ ಅದ್ಧೂರಿಯಾಗಿ ನೆರವೇರಿತು.
ಕಳೆದ ಎಂಟು ಹತ್ತು ದಿನಗಳಿಂದ ಜಾತ್ರಾ ಮಹೋತ್ಸವದ ಅಂಗವಾಗಿ ಮುರಘಾಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರತಿ ದಿನವು ನಡೆಯುತ್ತಿವೆ.
ಇಂದು ಬೆಳಿಗ್ಗೆ ಮಠದಲ್ಲಿ ಲಿಂಗ ದೀಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಜೆ 4 ಕ್ಕೆ ಡಾ.ಶಿವಮೂರ್ತಿ ಮುರುಘಾ ಶರಣರು ರಥೋತ್ಸವಕ್ಕೆ ಚಾಲನೆ ನೀಡಿದರು.
ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳು ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯವಹಿಸಿದ್ದರು.
ಮಹಾ ರಥೋತ್ಸವಕ್ಕೆ ನಾಡಿನ ವಿವಿಧ ಮಠಗಳ ಮಠಾಧೀಶರು ಸಾಕ್ಷಿಯಾದರು.
ಮುರುಘಾಮಠದಿಂದ ಎಳೆಯಲ್ಪಟ್ಟ ರಥಕ್ಕೆ ಭಕ್ತರು ಉತ್ತುತ್ತಿ, ಬಾಳೆಹಣ್ಣು, ನಿಂಬೆಹಣ್ಣು ತೂರಿ ಭಕ್ತಿಯ ನಮನ ಸಲ್ಲಿಸಿದರು.
ರಥವು ಡಿಪೊ ಸರ್ಕಲ್ ವರೆಗೆ ಬಂದು ಮರಳಿ ಮುರುಘಾಮಠಕ್ಕೆ ಬಂದು ತಲುಪಿತು.
ಧಾರವಾಡದ ಮುರುಘಾಮಠದ ಜಾತ್ರಾ ಮಹೋತ್ಸವಕ್ಕೆ ಜನ ಸಾಗರವೇ ಹರಿದು ಬಂದಿದ್ದು ವಿಶೇಷವಾಗಿತ್ತು.