ಜವಾಬ್ದಾರಿಯಿಂದ ನುಣಚಿಕೊಂಡ ಮೇಯರ್ ಈರೇಶ ಅಂಚಟಗೇರಿ
ಸಂಬಳ ಯಾರು ಕೊಡಬೇಕೆಂಬ ಗೊಂದಲವಿದೆ ಎಂದು ಕೈ ಚೆಲ್ಲಿದ ಮಹಾನಗರ ಪಾಲಿಕೆ
ಬಸವರಾಜ ಕೊರವರ ಮನವೊಲಿಸಲು ಯತ್ನ ವಿಫಲ
ಧಾರವಾಡ ಪ್ರಜಾಕಿರಣ.ಕಾಮ್ : ಹುಬ್ಬಳ್ಳಿ ಧಾರವಾಡ ನೀರು ಸರಬರಾಜು 584 ನೌಕರರ ಎಳು ತಿಂಗಳ ಸಂಬಳ ಯಾರು ಕೊಡಬೇಕೆಂಬ ಗೊಂದಲವಿದೆ ಎಂದು ಮೇಯರ್ ಈರೇಶ ಅಂಚಟಗೇರಿ ಹೇಳಿದರು.
ಅವರು ಮಂಗಳವಾರ ಬೆಳ್ಳಂ ಬೆಳಗ್ಗೆ ಮಹಾನಗರ ಪಾಲಿಕೆ ಆವರಣದಲ್ಲಿ
320 ನೌಕರರು ನಡೆಸುತ್ತಿರುವ ಅಮರಣ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನೇತೃತ್ವ ವಹಿಸಿದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಮನವೊಲಿಸಲು ವಿಫಲ ಯತ್ನ ನಡೆಸಿದರು.
ಮರುನೇಮಕ ಸರಕಾರದ ಮಟ್ಟದಲ್ಲಿಯಿದೆ ಎಂದು ಮತ್ತೆ ದಾರಿ ತಪ್ಪಿಸುವ ಕೆಲಸ ಮಾಡಿದರು.
ಸ್ವತಃ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮೇಯರ್, ಆಯುಕ್ತರಿಗೆ ಹೊಣೆ ನೀಡಿದರೂ ಇದು ತಮ್ಮ ಮಟ್ಟದಲ್ಲಿ ಇಲ್ಲ ಎಂದು ಜವಾಬ್ದಾರಿಯಿಂದ ನುಣಿಚಿಕೊಂಡರು.
ಬೇಕಿದ್ದರೆ ಮೂರು ತಿಂಗಳ ಸಂಬಳ ಬಿಡುಗಡೆಗೆ ಕ್ರಮ ವಹಿಸಲಾಗುವುದು ಅದಕ್ಕೆ ಸ್ವಲ್ಪಮಟ್ಟಿಗೆ ಕಾಲಾವಕಾಶ ಬೇಕಾಗುತ್ತದೆ ಎಂದು ಅಚ್ಚರಿ ಮೂಡಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಮಾತು ಕೇಳಿ ಎಳು ತಿಂಗಳಿಂದ ಕೆಲಸ ಮಾಡಿದ ನೌಕರರಿಗೆ ಈಗ ಯಾರು ಸಂಬಳ ಬಟವಡೆ ಮಾಡಬೇಕು ಎಂಬ ಪ್ರಶ್ನೆ ಎದುರಾಗಿದೆ. ಆತಂಕದ ಸಂಗತಿಯೆಂದರೆ ಜಲಮಂಡಳಿ ಕೇವಲ 256 ನೌಕರರು ಮಾತ್ರ ಕೆಲಸ ಮಾಡಿದ್ದಾರೆ ಎಂದು ಪಟ್ಟಿಕೊಟ್ಟಿದ್ದಾರೆ. ಹಾಗಿದ್ದರೆ ಉಳಿದವರ ಸ್ಥಿತಿ ಏನು ಎಂಬ ಪ್ರಶ್ನೆ ಎದುರಾಗಿದೆ. ಕೆ ಯು ಡಿ ಎಫ್ ಸಿ ಯವರು ಸಂಬಳ ಬಡವಟೆಗೆ ಸಿದ್ದರಿಲ್ಲ ಎಂದು ಮೇಯರ್ ಈರೇಶ ಅಂಚಟಗೇರಿ ಹಾರಿಕೆ ಉತ್ತರ ನೀಡಿದರು.
ಅವರ ಈ ನಡೆಯಿಂದ ಮತ್ತಷ್ಟು ಬೇಸರ ವ್ಯಕ್ತಪಡಿಸಿದ ಬಸವರಾಜ ಕೊರವರ, ಎಲ್ಲಾ 358 ನೀರು ಸರಬರಾಜು ನೌಕರರ ಮರುನೇಮಕವಾಗುವರೆಗೆ ಇಲ್ಲಿಂದ ಕದಲುವುದಿಲ್ಲ. ಬೇಕಿದ್ದರೆ ನಮ್ಮ ಪ್ರಾಣ ಇಲ್ಲಿಯೇ ಹೋಗಲಿ ಎಂದು ಸವಾಲು ಎಸೆದರು.
ಕೊನೆಗೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರ ಗಮನ ಸೆಳೆದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮೇಯರ್ ನಿರ್ಗಮಿಸಿದರು.
ಅಲ್ಲದೆ, ಸಿಎಂ ಕಾರ್ಯಕ್ರಮ ಇರುವುದರಿಂದ ಸಾಮಾನ್ಯ ಸಭೆಗೆ ಬರುತ್ತಿಲ್ಲ. ಉಪಮೇಯರ್ ಸಭೆ ನಡೆಸಲಿದ್ದಾರೆ ಎಂದು ಸಮಜಾಯಿಸಿ ನೀಡಿದರು.
ಮೇಯರ್ ಈರೇಶ ಅಂಚಟಗೇರಿ ಅವರ ಈ ನಡೆ ನೋಡಿದರೆ ಅವರಿಗೆ ಅವಳಿನಗರದ ಬಹು ದೊಡ್ಡ ನೀರಿನ ಸಮಸ್ಯೆಗಿಂತ, ನೂರಾರು ಜನ ನೌಕರರ ಅಮರಣ ಉಪವಾಸ ಸತ್ಯಾಗ್ರಹಕ್ಕಿಂತ ತಮ್ಮ ವೈಯಕ್ತಿಕ ಪ್ರತಿಷ್ಟೆಯೇ ಮುಖ್ಯವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ಬೇಸರ ವ್ಯಕ್ತಪಡಿಸಿದರು.