ಧಾರವಾಡ prajakiran.com : ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಅಖಾಡ ರಂಗೇರಿದೆ.
ಹಾಲಿ ಅಧ್ಯಕ್ಷ ಲಿಂಗರಾಜ ಅಂಗಡಿ ಗೆದ್ದೆ ತೀರಬೇಕು ಎಂದು ಹಠಕ್ಕೆ ಬಿದ್ದು ಪ್ರಚಾರ ನಡೆಸುತ್ತಿದ್ದರೆ ಅವರನ್ನು ಸೋಲಿಸಿಯೇ ತೀರ ಬೇಕು ಎಂದು ಪಟ್ಟು ಹಿಡಿದಿರುವ ಮಾಜಿ ಅಧ್ಯಕ್ಷ ಡಿಎಂ ಹಿರೇಮಠ ಅವರ ನಡುವೆ ಚುನಾವಣಾ ಪ್ರಚಾರದ ವೇಳೆ ಮಾತಿನ ವಾಕ್ಸರ ನಡೆದಿದೆ.
ಪರಸ್ಪರ ಏಕವಚನದಲ್ಲಿ ಕಿತ್ತಾಡಿಕೊಂಡು, ನಿಂದಿಸಿಕೊಂಡಿರುವುದು ಸಾಹಿತ್ಯ ವಲಯ ತಲೆ ತಗ್ಗಿಸುವಂತೆ ಮಾಡಿದೆ.
ಇವರಿಬ್ಬರ ಜಗಳ ನೋಡಿ ಅನೇಕ ಶಿಕ್ಷಕರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.
ಅನೇಕರು ಇಬ್ಬರಿಗೂ ಸಮಜಾಯಿಸಿದಿದರೂ ಪರಸ್ಪರ ನಿಂದನೆ ಮಾಡಿಕೊಳ್ಳುವ ಮೂಲಕ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.
ಇಂತಹ ಹೊಲಸು ರಾಜಕೀಯ ಸಾಹಿತ್ಯ ಪರಿಷತ್ತಿನ ಅಂಗಳದಲ್ಲಿ ಇರುವವರಿಗೆ ಬೇಕಿತ್ತಾ ಎಂದು ಪ್ರಶ್ನಿಸುವಂತಾಗಿದೆ.
ಜೊತೆಗೆ ಮಾಜಿ ಕಸಾಪ ಅಧ್ಯಕ್ಷ ಡಿಎಂ ಹಿರೇಮಠ ಈಗ ದ.ರಾ ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷ.
ಅಂತಹ ಹಿರಿಯ ಹುದ್ದೆಯಲ್ಲಿದ್ದವರಿಗೆ ಕಾಲೇಜು ಪ್ರಾಧ್ಯಾಪಕರು ಆಗಿರುವ ಹಾಲಿ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಬಳಕೆ ಮಾಡಿರುವ ಶಬ್ದಗಳ ಪ್ರಯೋಗ ಸರಿಯಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದರು..
ಇದೇನು ಸಂಸ್ಕೃತಿ ಇದೇನು ಸಭ್ಯತೆ ಎಂದು ಸಾಹಿತಿಗಳು, ಕನ್ನಡ ಅಭಿಮಾನಿಗಳು, ಸಾಹಿತ್ಯಾಭಿಮಾಗಳು,ಯುವಕರು ಮಾತನಾಡಿಕೊಳ್ಳುವಂತಾಗಿದೆ.
ಇಂತಹ ಸಂಗತಿ ನಡೆದಿರುವುದು ಧಾರವಾಡದ ಪ್ರತಿಷ್ಠಿತ ಶಾಲೆ ಆವರಣದಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತಿನ ಸಭೆಯಲ್ಲಿ.
ಅದು ಹಲವಾರು ಶಿಕ್ಷಕರ ಎದುರು ಇಬ್ಬರು ಜಟಾಪಟಿ ನಡೆಸಿ ತಮ್ಮನ್ನು ತಾವೇ ಬಟಾಬಯಲು ಮಾಡಿಕೊಂಡಿದ್ದಾರೆ.
ಇಂತಹವರು ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಬೇಕಾ. ಇದು ನಾಡಿನ ಜನರ ಮಿಲಿಯನ್ ಡಾಲರ್ ಪ್ರಶ್ನೇ ಎಂದು ಕಸಾಪ ಸದಸ್ಯ ವಿಜಯಕುಮಾರ ಈಶ್ವರ ಕಮ್ಮಾರ ಸಾಮಾಜಿಕ ಜಾಲತಾಣದಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.
ಇವರಿಬ್ಬರ ಜಗಳಬಂದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ, ಇದೆಲ್ಲಾ ಇವರಿಬ್ಬರಿಗೆ ಬೇಕಿತ್ತಾ.
ಯಾಕೆ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಹಿತ್ಯ ವಲಯದಲ್ಲಿ ಇಂತಹ ಹೊಲಸು ರಾಜಕೀಯ ಒಕ್ಕರಿಸಿದ ದಿನ ಸರಸ್ವತಿಯ ಸಾವು ಎಂದು ಕಸಾಪ ಸದಸ್ಯ ಕೃಷ್ಣಮೂರ್ತಿ ಕುಲಕರ್ಣಿ ಖೇದ ವ್ಯಕ್ತಪಡಿಸಿದರು.
ಒಟ್ಟಾರೆ ಪ್ರತಿಷ್ಟೆಯಾಗಿ ತೆಗೆದುಕೊಂಡಿರುವ ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎನ್ನುವಂತೆ ಕಸಾಪ ಚುನಾವಣೆ ಅಖಾಡಕ್ಕೆ ದುಮುಕಿರುವ ಹಿರಿಯ ಪತ್ರಕರ್ತ ನಾಗರಾಜ ಕಿರಣಗಿ ಅವರಿಗೆ ಲಾಭಾವಾದರೂ ಅಚ್ಚರಿಪಡಬೇಕಿಲ್ಲ ಎಂಬುದು ಅನೇಕ ಸಾಹಿತಿಗಳ ಅನಿಸಿಕೆಯಾಗಿದೆ.