ಎಸ್ಡಿಎಂ ಆಸ್ಪತ್ರೆಗೆ ಡಿಎಚ್ಓ ಭೇಟಿ
ಧಾರವಾಡ prajakiran.com ಜ.20 :ನಾಡಿನ ಹಿರಿಯ ಕವಿ ನಾಡೋಜ ಡಾ. ಚೆನ್ನವೀರ ಕಣವಿ ಚಿಕಿತ್ಸೆ ಪಡೆಯುತ್ತಿರುವ ಎಸ್ಡಿಎಂ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸನಗೌಡ ಕರಿಗೌಡರ ಗುರುವಾರ ಭೇಟಿ ನೀಡಿ ಡಾ. ಚನ್ನವೀರ ಕಣವಿ ಆರೋಗ್ಯ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದರು.
ಡಾ. ಚೆನ್ನವೀರ ಕಣವಿ ಅವರು ಆಸ್ಪತ್ರೆಗೆ ದಾಖಲಾದ ದಿನದಿಂದ ಇಲ್ಲಿಯವರೆಗೆ ಅವರಿಗೆ ನೀಡಿರುವ ಚಿಕಿತ್ಸೆ ಹಾಗೂ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಸಂಗ್ರಹಿಸಿದರು.
ಡಾ. ಚೆನ್ನವೀರ ಕಣವಿ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣದಿದ್ದರೂ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.
ತಜ್ಞ ವೈದ್ಯರ ತಂಡ ನಿರಂತರ ನಿಗಾವಹಿಸಿದ್ದು, ವೈದ್ಯರು ಡಾ. ಕಣವಿ ಅವರ ಆರೋಗ್ಯ ಸುಧಾರಿಸುವ ಆಶಯ ವ್ಯಕ್ತ ಪಡಿಸಿದ್ದಾರೆ.
ಡಿಹೆಚ್ಓ ಡಾ. ಬಸನಗೌಡ ಕರಿಗೌಡರ ಅವರು ವೈದ್ಯರೊಂದಿಗೆ ಮಾತನಾಡಿ, ಕವಿ ಕಣವಿ ಅವರ ಆರೋಗ್ಯ ಚಿಕಿತ್ಸೆಗೆ ಎಲ್ಲ ನೆರವು ನೀಡುವುದಾಗಿ ಸರಕಾರ ತಿಳಿಸಿದ್ದು, ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಿ ಬೇಗ ಗುಣಮುಖರಾಗುವಂತೆ ನೋಡಿಕೊಳ್ಳಬೇಕು.
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ನಿಮ್ಮ ನೆರವಿಗೆ ಸದಾ ಸಿದ್ಧವಿದೆ ಎಂದು ವೈದ್ಯರ ತಂಡಕ್ಕೆ ತಿಳಿಸಿದರು. ಡಾ. ಚೆನ್ನವೀರ ಕಣವಿ ಅವರ ಹಿರಿಯ ಮಗ ಶಿವಾನಂದ ಕಣವಿ ಅವರೊಂದಿಗೂ ಸಮಾಲೋಚಿಸಿ, ಧೈರ್ಯ ನೀಡಿದರು.
ಈ ಭೇಟಿ ಕುರಿತು ಸಮಗ್ರ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ಡಿಎಚ್ಓ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಡಿಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ, ಉಪಅಧೀಕ್ಷಕ, ತಜ್ಞ ವೈದ್ಯರು ಮತ್ತು ಡಾ.ಕಣವಿ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.