ದಾವಣಗೇರಿ ಪ್ರಜಾಕಿರಣ.ಕಾಮ್ :
ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿರುವ ಧಾರವಾಡ ಜಿಲ್ಲೆಯ ಹಿರಿಯ ಪತ್ರಕರ್ತ ಮೆಹಬೂಬ ಮುನವಳ್ಳಿ ಅವರ ಬಿಡುಗಡೆ ಹಾಗೂ ದಾವಣಗೇರಿ ಎಸ್ಪಿ ರಿಷ್ಯಂತ್ ಅವರ ವರ್ಗಾವಣೆಗೆ ಆಗೃಹಿಸಿ ಮಂಗಳವಾರ ದಾವಣಗೇರಿಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಯ ಪತ್ರಕರ್ತರು ಜಯದೇವ ಸರ್ಕಲ್ ನಿಂದ ಐಜಿಪಿ ಕಚೇರಿವರೆಗೆ 5 ಕಿಲೋಮೀಟರ್ ಪಾದಯಾತ್ರೆ ನಡೆಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ. ಮಾತನಾಡಿ, ಸಂವಿಧಾನದ 4 ನೇ ಅಂಗವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ದಾವಣಗೇರಿ ಎಸ್ಪಿ ಉದ್ದೇಶಪೂರ್ವಕವಾಗಿ ಮೆಹಬೂಬ ಮುನವಳ್ಳಿ ಬಂಧನ ಮಾಡಿದ್ದಾರೆ. ಹೀಗಾಗಿ ಪ್ರಕರಣದ ಕುರಿತು ಸಿಐಡಿ ತನಿಖೆ ಆಗಿ ಸತ್ಯಾಸತ್ಯತೆ ಸಮಾಜಕ್ಕೆ ಗೊತ್ತಾಗಬೇಕು. ಇಲ್ಲದೇ ಹೋದ್ರೆ ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ್ ಎಚ್ಚರಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಧ್ವನಿ ರಾಜ್ಯಾಧ್ಯಕ್ಷ ಬಂಗಲೆ ಮಲ್ಲಿಕಾರ್ಜುನ ಮಾತನಾಡಿ,
ಪತ್ರಕರ್ತರಿಗೆ ಅನ್ಯಾಯವಾಗುತ್ತಿದೆ. ಮೆಹಬೂಬ ಮುನವಳ್ಳಿ ಪ್ರಕರಣದಲ್ಲಿ ಕುಟುಂಬ ಬಹಳಷ್ಟು ನೊಂದಿದೆ. ನೊಂದವರ ಪರವಾಗಿ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಯಾವತ್ತಿಗೂ ಇರುತ್ತೆ. ಈ ಬಗ್ಗೆ ನಾಳೆ ಬೆಂಗಳೂರಿಗೆ ತೆರಳಿ ಡಿಜಿಪಿ ಪ್ರವೀಣ ಸೂದ್ ಹಾಗೂ ಎಡಿಜಿಪಿ ಅಲೋಕಕುಮಾರ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಧಾರವಾಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ನಾಗರಾಜ ಕಿರಣಗಿ ಮಾತನಾಡಿ, ಕೊಲೆ ಮಾಡಿದ ಆರೋಪಿಗಳು ದೂರವಾಣಿ ಕರೆ ಮಾಡಿದ್ದಾರೆ ಎಂದು ಪತ್ರಕರ್ತ ಮೆಹಬೂಬ್ ಬಂಧಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಅಲ್ಲದೆ, ಅವರು ಆರೋಪಿಗಳನ್ನು ಶರಣಾಗುವಂತೆ ಮಾಡಿದ್ದಾರೆ. ಆದರೂ ಅವರನ್ನು ಕೊಲೆ ಆರೋಪಿಗಳಿಗೆ ರಕ್ಷಣೆ ನೀಡಿದ್ದಾರೆ ಎಂದು ಆರೋಪಿಸಿ ಬಂಧಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ರಾಜ್ಯದ ನೂರಾರು ಸಂಖ್ಯೆಯ ಪತ್ರಕರ್ತರು ಭಾಗಿಯಾಗಿದ್ದು ವಿಶೇಷವಾಗಿತ್ತು. ಬಳಿಕ ಮನವಿ ಸ್ವೀಕರಿಸಿದ ಐಜಿಪಿ ತ್ಯಾಗರಾಜನ್ ಅವರು ಎಎಸ್ಪಿ ಅವರ ನೇತೃತ್ವದಲ್ಲಿ ತನಿಖೆ ನಡೆಸಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.