ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೆ ಗುಡ್ ಬೈ ಹೇಳಿ ರಾಜಣ್ಣ ಕೊರವಿ ಬಿಜೆಪಿ ಸೇರಿದ್ದರಿಂದ ಕಳೆದ ಹಲವು ದಿನಗಳಿಂದ ಮಹಾನಗರ ಜಿಲ್ಲಾಧ್ಯಕ್ಷ ಹುದ್ದೆ ಭರ್ತಿ ನೆನೆಗುದಿಗೆ ಬಿದ್ದಿತ್ತು.
ಆ ಹುದ್ದೆಯನ್ನು ಕೊನೆಗೂ ಜೆಡಿಎಸ್ ಭರ್ತಿ ಮಾಡುವ ಮೂಲಕ ಮತ್ತೆ ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಬಲತುಂಬಲು ಮುಂದಾಗಿದೆ.
ಕಳೆದ ಹಲವಾರು ವರ್ಷಗಳ ಕಾಲ ಹುಬ್ಬಳ್ಳಿಯವರ ಪಾಲಾಗಿದ್ದ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಈ ಬಾರಿ ಧಾರವಾಡದ ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ ಅವರನ್ನು ನೇಮಿಸಿರುವುದು ಪಕ್ಷಕ್ಕೆ ಆನೆ ಬಲಬಂದಂತಾಗಿದೆ.
ಅಲ್ಲದೆ, ಇದು ಮುಂಬರುವ ದಿನಗಳಲ್ಲಿ ನಡೆಯಲಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ, ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಜೊತೆಗೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಬೇಕಾದ ಜವಾಬ್ದಾರಿ ಮತ್ತು ಹೊಣೆಗಾರಿಕೆ ಅವರ ಮೇಲಿದೆ.
ಇದಲ್ಲದೆ, ಕಳೆದ ಹಲವು ವರ್ಷಗಳಿಂದ ಉತ್ಸಾಹ ಕಳೆದುಕೊಂಡ ಧಾರವಾಡ ತಾಲೂಕು ಘಟಕ, ನಗರ ಘಟಕ, ವಾರ್ಡ್ ಹಾಗೂ ಬೂತ್ ಮಟ್ಟದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಿ ವಿಜಯ ಪತಾಕೆ ಹಾರಿಸುತ್ತಾರೆಯೇ ಎಂಬುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕು.