ಭರವಸೆ ಕಳೆದುಕೊಳ್ಳದೇ ಮುನ್ನಡೆಯಿರಿ : ಶೃತಿ ಯರಗಟ್ಟಿ
ಧಾರವಾಡ ಪ್ರಜಾಕಿರಣ.ಕಾಮ್ ನಿಶ್ಚಿತ ಗುರಿ ಈಡೇರಿಕೆಗಾಗಿ ನಿರಂತರ ಪ್ರಯತ್ನ ಹಾಗೂ ತಾಳ್ಮೆಯೂ ಬೇಕು. ಯಾವುದೇ ಕಾರಣಕ್ಕೂ ಭರವಸೆ ಕಳೆದುಕೊಳ್ಳದೇ ಮುನ್ನಡೆಯಬೇಕೆಂದು ಯು.ಪಿ.ಎಸ್.ಸಿ ಟಾಪರ್ (೩೬೨ ನೇ ರ್ಯಾಂಕ್) ಕು. ಶೃತಿ ಯರಗಟ್ಟಿ ಹೇಳಿದರು.
ಅವರು ಕ್ಲಾಸಿಕ್ ಕೆಎಎಸ್ ಐಎಎಸ್ ಸ್ಟಡಿ ಸರ್ಕಲ್ ಸಂಸ್ಥೆಯ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದಿನ ಪತ್ರಿಕೆಗಳನ್ನು ತಪ್ಪದೇ ಓದಬೇಕು. ಪುಸ್ತಕಗಳು, ಸಾಮಾಜಿಕ ಜಾಲತಾಣ, ಸಾಧಕರು, ಹಳೆಯ ಪ್ರಶ್ನೆ ಪತ್ರಿಕೆಗಳು ಮುಂತಾದ ಮೂಲಗಳಿಂದ ಜ್ಞಾನಸಂಪಾದನೆ ಮಾಡಬೇಕು.
ಸಮಾನ ಮನಸ್ಕರೊಂದಿಗೆ ಚರ್ಚೆ ಮಾಡಬೇಕು. ಸಮಯ ಹೊಂದಾಣಿಕೆ ಮತ್ತು ಗುರಿಯ ಬದ್ಧತೆಯೊಂದಿಗೆ ಸಾಗಬೇಕು. ತಂದೆ-ತಾಯಿ ಗುರು-ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಮೂಹ ಸಂಸ್ಥೆಗಳ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶಕ ಲಕ್ಷ್ಮಣ ಎಸ್. ಉಪ್ಪಾರ ಮಾತನಾಡಿ, ಮನಸ್ಸಿನಲ್ಲಿ ಸದಾ ಶಾಂತತೆಯನ್ನು ಕಾಪಾಡಿಕೊಂಡು ಶೃದ್ಧೆ ಪ್ರಮಾಣ ಕತೆಯಿಂದ ಕೂಡಿದ ಅಧ್ಯಯನವಿರಲಿ, ಕಡಿಮೆ ಮಾತನಾಡಿ ಸಾಧನೆಯ ಕಡೆಗೆ ಹೆಚ್ಚು ಗಮನಹರಿಸಬೇಕು.
ಹೋಲಿಕೆ ಮತ್ತು ಕೀಳರಿಮೆ ಬಿಟ್ಟು ನಿಮ್ಮಲ್ಲಿರುವ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ವಿಯಾಗಿರಿ ಎಂದು ಹೇಳಿದರು.
ಕ್ಲಾಸಿಕ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕಿ ಸುಜಾತಾ ಪಿ. ಉಪನ್ಯಾಸಕರಾದ ಡಾ. ಗಿರಿಜಾ ಹಿರೇಮಠ, ರವಳನಾಥ ಪಾಟೀಲ ವೇದಿಕೆಯಲ್ಲಿದ್ದರು.
ಸಂಯೋಜಕ ಬಸವರಾಜ ಕುಪ್ಪಸಗೌಡ್ರ ಸ್ವಾಗತಿಸಿ ನಿರೂಪಿಸಿದರು. ವ್ಯವಸ್ಥಾಪಕ ದೀಪಕ ಜೋಡಂಗಿ ವಂದಿಸಿದರು.