ಹುಬ್ಬಳ್ಳಿ prajakiran.com : ಸ್ವಚ್ಛ ಹಾಗೂ ನಿರ್ಮಲ ಹುಬ್ಬಳ್ಳಿ ಧಾರವಾಡ ನಿರ್ಮಾಣ ಮಾಡುವುದು ಮೊದಲ ಆದ್ಯತೆ ಆಗಿದ್ದು,ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಆಡಳಿತ ತೆಗೆದುಕೊಂಡು ಹೋಗಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಜರುಗುವಂತೆ ಶ್ರಮಿಸಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೂತನ ಮೇಯರ್ ಈರೇಶ ಅಂಚಟಗೇರಿ ತಿಳಿಸಿದರು.
ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಅವಳಿನಗರವನ್ನು ಮಾದರಿ ನಗರವನ್ನಾಗಿ ನಿರ್ಮಿಸುವ ಧ್ಯೇಯೋದ್ದೇಶ ಹೊಂದಿದ್ದೇನೆ.
ಜನ ಮೆಚ್ಚುವ ಆಡಳಿತ ನೀಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಎಲಾಗುವುದು ಎಂದರು.
ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಆಗಿ ಆಯ್ಕೆಯಾಗಲು ಕಾರಣಿಭೂತರಾದ ನಮ್ಮ ನಾಯಕರು ಮಾರ್ಗದರ್ಶಕರು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್, ಎಸ ವಿ ಸಂಕನೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹಾಗೂ ಮಹಾನಗರ ಪಾಲಿಕೆ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಬಿಜೆಪಿ ಕಾರ್ಯಕರ್ತರು ಹಾಗು ಹಿತೈಷಿಗಳಿಗೆ ಹೃದಯಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆದರ್ಶದ ಅನ್ವಯ ದಕ್ಷ ಆಡಳಿತ ನಡೆಸಿ ಜನಸೇವೆ ಮಾಡಲು ಕಟಿಬದ್ದನಾಗಿರುತ್ತೇನೆ ಹಾಗೂ ಪಕ್ಷದ ವರಿಷ್ಠರು ನೀಡಿದ ಜವಾಬ್ದಾರಿ ಶಿರಸಾ ವಹಿಸಿ ನಿರ್ವಹಿಸುತ್ತೇನೆ ಎಂದರು.
ಇದಕ್ಕಾಗಿ ಜನತೆಯ ಆಶೀರ್ವಾದ ಹಾಗೂ ಸಹಕಾರ ಕೋರುತ್ತೇನೆ ಎಂದರು.