ರಾಜ್ಯ

ಸರ್ಕಾರದ ವತಿಯಿಂದ ಸಮಾನತಾ ದಿನಾಚರಣೆ

ಬೆಂಗಳೂರು prajakiran. com ಏ. 11: ಮುರುಘಾ ಶರಣರ ಜನ್ಮದಿನವನ್ನು ಸಮಾನತಾ ದಿನವೆಂದು ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ
ಚಿತ್ರದುರ್ಗದ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚರಣೆ ಬದಲಾಗಿ ಹಮ್ಮಿಕೊಂಡಿದ್ದ
ಸಮಾನತ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

*ಹೊಸ ಮನ್ವಂತರ*

ಬಸವಣ್ಣನವರ ವೈಚಾರಿಕತೆ ತತ್ವ ಆದರ್ಶಗಳನ್ನು ಪುನ: ಬಿತ್ತುವಂಥ ಸಾಹಸಕ್ಕೆ ಕೈ ಹಾಕಿರುವ ಸೃಜನಶೀಲ ಚಿಂತಕರೂ ಆಗಿರುವ ಡಾ: ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚಾರಣೆಯನ್ನು ಸಮಾನತಾ ದಿನ ಎಂದು ಆಚರಿಸಲಾಗುತ್ತಿರುವುದು ಸೂಕ್ತ ವಾಗಿದೆ.

ಬಸವಾದಿ ಶರಣರ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸಭೆ ಸಮಾರಂಭಗಳಲ್ಲಿ ಕೇಳಿಬರುವ ಮಾತು. 12 ನೇ ಶತಮಾನದಲ್ಲಿ ಸಮಾನತೆ ತರುವುದು, ಲಿಂಗಬೇಧ, ಮೂಢ ನಂಬಿಕೆಗಳನ್ನು ತೊಡೆದುಹಾಕುವುದಕ್ಕಾಗಿ ಹೋರಾಟ ನಡೆಯಿತು.

ಅವರ ವಿಚಾರ ಇಂದಿಗೂ ಪ್ರಸ್ತುತ ಎಂದರೆ ಆ ಎಲ್ಲಾ ಅನಿಷ್ಟಗಳು ಇಂದಿಗೂ ಪ್ರಚಲಿತವಾಗಿವೆ ಎಂಬ ಚಿಂತನೆ ಮೂಡುತ್ತದೆ. ಸಮಾಜ ಪರಿವರ್ತನೆಗೆ ನಿರಂತರವಾದ ಶುದ್ದೀಕರಣದ ಅಗತ್ಯವಿದೆ.

ನಮ್ಮ ಕನ್ನಡ ನಾಡಿನಲ್ಲಿ ಈ ದಿಟ್ಟ ಹೆಜ್ಜೆಯನ್ನು ಇಟ್ಟಿರುವುದು ಮುರುಘಾ ಶರಣರು. ಹಲವಾರು ಟೀಕೆ ಟಿಪ್ಪಣಿಗಳು ಬಂದಾಗಲೂ ಬಸವತತ್ವವನ್ನು ಎಂದಿಗೂ ಕೈಬಿಡುವುದಿಲ್ಲ ಎನ್ನುವ ದಿಟ್ಟ ನಿಲುವಿನಿಂದ ಸಮಾಜದ ಎಲ್ಲಾ ವರ್ಗದ ಜನರಿಗೆ, ಧ್ವನಿ ಇಲ್ಲದವರಿಗೆ ಧ್ವನಿ, ಗುರುತಿಲ್ಲದವರಿಗೆ ಗುರುತು ನೀಡಲು ಹಾಗೂ ಎಲ್ಲಾ ಸಮಾಜದವರಿಗೆ ಗುರು ಪೀಠ ಸ್ಥಾಪನೆ ಮಾಡುವ ಮೂಲಕ ಹೊಸ ಮನ್ವಂತರವನ್ನು ತಂದಿದ್ದಾರೆ ಎಂದರು.

*ಪ್ರತಿರೋಧದ ನಡುವೆ ಪರಿವರ್ತನೆ*

ಕಾಕತಾಳೀಯವೆಂದರೆ ಬಸವಣ್ಣನವರು ಪರಿವರ್ತನೆಯ ಕಾಲ 12 ನೇ ಶತಮಾನ, ಇಂದು ಮುರುಘಾ ಶರಣರು ಪರಿವರ್ತನೆ ಮಾಡುವ ಕಾಲ 21 ನೇ ಶತಮಾನ. 12 ನೇ ಶತಮಾನದಲ್ಲಿ ಮಾಡಿದ್ದನ್ನು 21 ನೇ ಶತಮಾನದಲ್ಲಿ ಮಾಡುವ ಅವಶ್ಯಕತೆ ಕಂಡು ಮುರುಘಾ ಶರಣರು ಇದನ್ನು ಮಾಡುತ್ತಿದ್ದಾರೆ.

12 ನೇ ಶತಮಾನದಲ್ಲಿಯೂ ಇದೇ ಪರಿಸ್ಥಿತಿ ಇತ್ತು. ಸಾಕಷ್ಟು ಪ್ರತಿರೋಧದ ನಡುವೆ ಪರಿವರ್ತನೆ ಆಯಿತು. 21 ನೇ ಶತಮಾನದಲ್ಲಿಯೂ ಅಷ್ಟೇ ಪ್ರತಿರೋಧ ಇದೆ. ಸರ್ವರಿಗೂ ಸಮಾನತೆ ನೀಡುವ ತತ್ವವನ್ನು ನಿರಂತರವಾಗಿ ಸಮಾಜದಲ್ಲಿ ಬೇರೂರಬೇಕೆಂಬ ಸಂಕಲ್ಪವನ್ನು ಈ ಸಮಾಜದಲ್ಲಿ 21 ನೇ ಶತಮಾನದಲ್ಲಿ ಮಾಡುವುದು ಬಹಳ ದೊಡ್ಡ ಸವಾಲು.

ಆ ಸವಾಲನ್ನು ಅತ್ಯಂತ ಯಶಸ್ವಿಯಾಗಿ ಎದುರಿಸಿ ಅದರ ಬೀಜಾಂಕುರ ಮಾಡಿರುವುದು ಮುರುಘಾ ಶರಣರು ಎಂದು ಭಕ್ತಿ ಮತ್ತು ಹೆಮ್ಮೆಯಿಂದ ಹೇಳುವುದಾಗಿ ತಿಳಿಸಿದರು.

*ದೇಶದ ಅಂತ:ಸತ್ವ ಚಾರಿತ್ರ್ಯ ವಂತ ಸಮಾಜ*
ಈ ದೇಶಕ್ಕೆ 5000 ವರ್ಷಗಳ ಚರಿತ್ರೆ ಇದೆ. ಬೇಕಾಗಿರುವುದು ಚಾರಿತ್ರ್ಯ. ಆರ್ಥಿಕ ಅಭಿವೃದ್ಧಿಯಿಂದ ದೇಶ ಮುಂದುವರೆಯುತ್ತದೆ.

ದೇಶದ ಅಂತ:ಸತ್ವ ಚಾರಿತ್ರ್ಯವಂತ ಸಮಾಜ. ಪ್ರತಿಯೊಬ್ಬ ನಾಗರಿಕನೂ ಅದರ ಪಾಲನೆಯನ್ನು ಮಾಡಿದರೆ ದೇಶ ಉನ್ನತ ಸ್ಥಾನಕ್ಕೇರುತ್ತದೆ. ಚರಿತ್ರೆಯ ಜೊತೆಗೆ ಚಾರಿತ್ರ್ಯದ ಅವಶ್ಯಕತೆ ಇದೆ. ಈ ದೇಶದಲ್ಲಿ ಬಹಳಷ್ಟು ಆಚಾರ್ಯರಿದ್ದಾರೆ.

ಬೇಕಾಗಿರುವುದು ಆಚರಣೆ. ನಮಗೆ ಆತ್ಮ ಶಕ್ತಿ ನೀಡುವ ತತ್ವಗಳನ್ನು ಹೇಳಿದ್ದಾರೆ. ಆದರೆ ಅದನ್ನು ಆಚರಣೆಗೆ ತರಬೇಕಿದೆ. ಇದನ್ನು ಅರ್ಥಮಾಡಿಕೊಂಡರೆ ಪರಮಪೂಜ್ಯರ ಧ್ಯೇಯಕ್ಕೆ ಸಾರ್ಥಕತೆ ಬರುತ್ತದೆ ಎಂದರು.

*ವ್ಯಕ್ತಿಗಳಿಂದ ಜಗತ್ತಿನ ಪರಿವರ್ತನೆ*
ಮನಪರಿವರ್ತನೆಯಿಂದ ಜಗತ್ತು ಪರಿವರ್ತನೆ ಆಗುತ್ತದೆ. ಜಗತ್ತಿನಲ್ಲಿ ಅತ್ಯಂತ ಪ್ರಮುಖ ಪರಿವರ್ತನೆ ಆಗಿರುವುದು ದೊಡ್ಡ ದೇಶ, ಸಂಸ್ಥೆಗಳಿಂದ ಅಲ್ಲ.

ಪರಿವರ್ತನೆಯಾಗಿರುವುದು ಕೇವಲ ವ್ಯಕ್ತಿ ಮತ್ತು ಶಕ್ತಿಗಳಿಂದ. ಅತ್ಯಂತ ಪ್ರಾಂಜಲ ಮನಸ್ಸಿನಿಂದ ಸಮಾಜವನ್ನು ಬದಲಾಗಿಸಬೇಕೆಂಬ ಪರಿವರ್ತಕರು ಬುದ್ಧ, ಬಸವ, ಅಲ್ಲಮ ಪ್ರಭು, ಜೀಸಸ್ ಕ್ರೈಸ್ಟ್, ಮೊಹಮ್ಮದ್ ಪೈಗಂಬರ್, ಮಹಾವೀರ ಜಗತ್ತಿನಲ್ಲಿ ಆಮೂಲಾಗ್ರ ಬದಲಾವಣೆಯನ್ನು ತಂದಿದ್ದಾರೆ. ಅವರು ಎಲ್ಲವನ್ನೂ ತ್ಯಾಗ ಮಾಡಿ ಏಕಚಿತ್ತದಿಂದ ಸಮಾಜವನ್ನು ಪರಿವರ್ತನೆ ಮಾಡಬೇಕೆಂದು ಶ್ರಮಿಸಿದರು ಎಂದರು.

ಈ ಸಂದರ್ಭದಲ್ಲಿ ಕನಕಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಚಿತ್ರದುರ್ಗದ ಮುರುಘಾ ಶರಣರು, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಇಂಧನ ಸಚಿವ ವಿ ಸುನಿಲ್ ಕುಮಾರ್, ಶಾಸಕ ಪಾಟೀಲ ತೇಲ್ಕೂರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮತ್ತು ಇತರರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *