ಧಾರವಾಡ prajakiran.com : ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿಯವರ ಜನ್ಮದಿನದ ಅಂಗವಾಗಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಅವರು ರಂಗಭೂಮಿ ಕಲಾವಿದರಿಗೆ ದಿನಸಿ ಕಿಟ್ ಗಳನ್ನು ವಿತರಿಸಿದರು.
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ತೊಂದರೆಗೊಳಗಾದ 40 ರಂಗಭೂಮಿ ಕಲಾವಿದರಿಗೆ ನೆರವು ನೀಡುವ ಉದ್ದೇಶದಿಂದ ಪಿ.ಎಚ್. ನೀರಲಕೇರಿ ಅವರು ಆಹಾರ ಧಾನ್ಯದ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎಚ್. ನೀರಲಕೇರಿ ಅವರು, ಲಾಕ್ ಡೌನ್ ನಿಂದ ಎಲ್ಲಾ ವರ್ಗದವರಿಗೂ ತೊಂದರೆ ಆಗಿದೆ.
ಅದರಲ್ಲೂ ಯಾವುದೇ ಕಾರ್ಯಕ್ರಮ, ವೇದಿಕೆಗಳಿಲ್ಲದೇ ರಂಗಭೂಮಿಯ ಕಲಾವಿದರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆದರೆ, ಸರಕಾರ ಮತ್ತು ಸಂಬಂಧಿಸಿದವರು ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಕಲಾವಿದರಿಗೆ ಸಹಾಯ ಮಾಡುವ ಸಲುವಾಗಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಜನುಮ ದಿನದ ಅಂಗವಾಗಿ ಅಲ್ಪ ನೆರವು ನೀಡಲಾಗುತ್ತಿದೆ.
ಸಮಾಜ ಸೇವೆಯಲ್ಲಿ ಕಲಾವಿದರು ಕೂಡ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ನೀರಲಕೇರಿ ಮನವಿ ಮಾಡಿದರು.
ಮಾಜಿ ಮೇಯರ್ ಐ. ಎಂ. ಜವಳಿ ಮಾತನಾಡಿ, ತೊಂದರೆಯಲ್ಲಿರುವ ಕಲಾವಿದರು ಮಾತ್ರವಲ್ಲದೇ ಅನೇಕ ವರ್ಗದ ಜನರಿಗೆ ಸಹಾಯ ನೀಡಿದ ಪಿ.ಎಚ್.ನೀರಲಕೇರಿ ಅವರ ಕಾರ್ಯವನ್ನು ಶ್ಲಾಘಿಸಿದರು.
ಡಯಟ್ ಉಪನ್ಯಾಸಕಿ ಅಫ್ರೋಜಾ ಕಾಟೇವಾಡಿ ಮುಖಂಡರಾದ ಸಿದ್ದಣ್ಣ ಕಂಬಾರ, ಶ್ರೀಶೈಲಗೌಡ ಕಮತರ, ಕಲಾವಿದರಾದ ವಿಜಯ ದೊಡಮನಿ, ವಿಲಾಸ ಶೇರಖಾನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.