ಧಾರವಾಡ prajakiran.com : ಧಾರವಾಡದ ಅಂಜುಮನ್ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿ ಮಹಮ್ಮದ್ ಅಲಿ ಪೀರವಾಲೆ ಎಂಬಾತ ಎಂ.ಜೆ.ಆರ್. ಝೆರಾಕ್ಸ್ ಹಾಗೂ ಆನ್ ಲೈನ್ ಅಪ್ಲಿಕೇಶನ್ ಕಂಪ್ಯೂಟರ್ ಸೆಂಟರ್ ನಲ್ಲಿ ನಕಲಿ ಮತದಾರರ ಗುರುತಿನ ಚೀಟಿಯನ್ನು ತಯಾರಿಸಿ ಕೊಡುತ್ತಿದ್ದವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷ್ನರೇಟ್ ನ ಸೈಬರ್ ಕ್ರೈಂ ವಿಭಾಗದ ಪೊಲೀಸರು ಈತನ ಅಂಗಡಿ ಮೇಲೆ ದಾಳಿ ಮಾಡಿದಾಗ, ಈತ ನಕಲಿ ಮತದಾರರ ಗುರುತಿನ ಚೀಟಿಯನ್ನು ಸಿದ್ಧಪಡಿಸಿ ನೀಡುತ್ತಿರೋದು ಖಚಿತವಾಗಿದೆ.
ಚುನಾವಣಾ ಆಯೋಗದ ವೆಬ್ ಸೈಟ್ ಬಳಸಿಕೊಂಡು ಮಹಮ್ಮದ್ ಅಲಿ ಅನೇಕರಿಗೆ ಗುರುತಿನ ಚೀಟಿ ಸಿದ್ಧಪಡಿಸಿ ನೀಡಿರೋದು ತನಿಖೆ ವೇಳೆ ಬಯಲಿಗೆ ಬಂದಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಜಿಲ್ಲಾಧಿಕಾರಿಗೆ ಬಂದಿತ್ತು. ಇದನ್ನು ಆಧರಿಸಿ ಸೈಬರ್ ಕ್ರೈಮ್ ಪೊಲೀಸರು ದಾಳಿ ಮಾಡಿದಾಗ ಮಹಮ್ಮದ್ ಅಲಿ ಅಂಗಡಿಯಲ್ಲಿ ಅನೇಕ ಗುರುತಿನ ಚೀಟಿಗಳು ಪತ್ತೆಯಾಗಿವೆ.
ಕೂಡಲೇ ಈತನನ್ನು ವಶಕ್ಕೆ ಪಡೆದ ಪೊಲೀಸರು ಧಾರವಾಡದ ಉಪ ನಗರ ಠಾಣೆಗೆ ಹೊತ್ತೊಯ್ದು ರಾತ್ರಿಯಿಡಿ ಡ್ರಿಲ್ ಮಾಡಿ ಮಹತ್ತರವಾದ ಮಾಹಿತಿ ಸಂಗ್ರಹಿಸಿದ್ದಾರೆ.
ಕಳೆದ ಅನೇಕ ದಿನಗಳಿಂದ ಈ ಕೆಲಸವನ್ನು ಮಾಡುತ್ತಿರೋದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.
ಇನ್ನು ಈ ರೀತಿಯಾದ ಅನೇಕ ಅಕ್ರಮಗಳು ಹಲವಾರು ದಿನಗಳಿಂದ ನಡೆಯುತ್ತಿದೆ ಅಂತಾ ಹಲವಾರು ಜನರು ಆರೋಪಿಸುತ್ತಲೇ ಇದ್ದರು.
ಅಲ್ಲದೇ ಅವಳಿ ನಗರದ ಕೆಲ ಕ್ಷೇತ್ರಗಳಲ್ಲಿ ಬೇರೆ ರಾಜ್ಯದಿಂದ ಬಂದಿರೋ ಜನರ ನಕಲಿ ಗುರುತಿನ ಚೀಟಿಗಳನ್ನು ಕೂಡ ತಯಾರಿಸಲಾಗಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.
ಈ ಬಗ್ಗೆಯೂ ಕೂಡ ಪೊಲೀಸರು ಗಂಭೀರವಾಗಿ ತನಿಖೆ ನಡೆಸಬೇಕು ಎಂಬುದು ಸ್ಥಳೀಯ ಮುಖಂಡ ಪಿ.ಎಚ್. ನೀರಲಕೇರಿಯವರ ಆಗ್ರಹವಾಗಿದೆ.
ಇನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರೋ ಜಿಲ್ಲಾಡಳಿತ ಈ ಬಗ್ಗೆ ಚುನಾವಣಾ ಆಯೋಗಕ್ಕೂ ಈ ವಿಚಾರವಾಗಿ ಗಮನ ಸೆಳೆದಿದೆ.
ಈ ಪ್ರಕರಣದಲ್ಲಿ ಆರೋಪಿ ಚುನಾವಣಾ ಆಯೋಗದ ವೆಬ್ ಸೈಟ್ ಬಳಸಿಯೇ ಈ ಅಕ್ರಮವನ್ನು ಎಸಗುತ್ತಿದ್ದ.
ಹೀಗಾಗಿ ಇದೊಂದು ಗಂಭೀರವಾದ ಪ್ರಕರಣವಾಗಿರೋ ಹಿನ್ನೆಲೆಯಲ್ಲಿ ಆಯೋಗ ವೆಬ್ ಸೈಟ್ ವಿಚಾರವಾಗಿ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಧಾರವಾಡ ಜಿಲ್ಲಾಡಳಿತ ಮನವಿ ಮಾಡಿದೆ.