ಧಾರವಾಡ prajakiran.com : ಹೆಬ್ಬಳ್ಳಿ ಜಿಪಂ ಬಿಜೆಪಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಧಾರವಾಡದ ೩ನೇ ಹೆಚ್ಚುವರಿ ಜಿಲ್ಲಾ ಹಾಗೂ ಸಿಬಿಐ ವಿಶೇಷ ನ್ಯಾಯಾಲಯವು ೧೪ ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿ ಮಹತ್ವದ ಆದೇಶ ಹೊರಡಿಸಿದೆ.
ಇದೇ ವೇಳೆ ವಿನಯ್ ಕುಲಕರ್ಣಿ ಅವರ ಪಾಲಿಗ್ರಾಫ್ ಟೆಸ್ಟ್ ಮಾಡಲು ಅನುಮತಿ ಕೋರಿ ಸಿಬಿಐ ನ್ಯಾಯಾಲಯಕ್ಕೆಅರ್ಜಿ ಸಲ್ಲಿಸಿದೆ.
ಆದರೆ ಇದಕ್ಕೆ ಅನುಮತಿ ನೀಡಲು ಮಾಜಿ ಸಚಿವರು ನಿರಾಕರಿಸಿದರು ಎಂದು ತಿಳಿದುಬಂದಿದೆ. ಹೀಗಾಗಿ ನ್ಯಾಯಾಧೀಶರು ಈ ಕುರಿತು ಯಾವುದೇ ಆದೇಶ ಹೊರಡಿಸದೆ ತೀರ್ಪುನ್ನು ಕಾಯ್ದಿರಿಸಿದರು.
ನ. ೬ರಂದು ನ್ಯಾಯಾಲಯದ ಮೂಲಕ ಮಾಜಿ ಸಚಿವ ವಿನಯ ಕುಲಕರ್ಣಿಯ ಹೆಚ್ಚಿನ ವಿಚಾರಣೆಗೆ ೩ ದಿನ ವಶಕ್ಕೆ ಪಡೆದಿದ್ದ ಸಿಬಿಐ ಅಧಿಕಾರಿಗಳು, ಹುಬ್ಬಳ್ಳಿಯ ಸಿಆರ್ ಮೈದಾನದಲ್ಲಿ ಕಳೆದ ಮೂರು ದಿನಗಳವರೆಗೆ ವಿನಯ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು.
ಸೋಮವಾರ ಸಿಬಿಐಗೆ ನೀಡಿದ್ದ ಕಾಲಾವಧಿ ಅಂತ್ಯಗೊಂಡಿದ್ದರಿಂದ ಸಿಬಿಐ ಅಧಿಕಾರಿಗಳು, ವಿಚಾರಣೆ ನಡೆಸಿದ ಸ್ಥಳ ಹುಬ್ಬಳ್ಳಿಯ ಸಿಆರ್ ಮೈದಾನದಿಂದ ಆರೋಪಿ ವಿನಯ ಕುಲಕರ್ಣಿ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಿದರು.
ಈ ವಿಚಾರಣೆ ಮಾಡಿದ ನ್ಯಾಯಾಧೀಶೆಯರಾದ ಶ್ರೀಮತಿ ಎಂ. ಪಂಚಾಕ್ಷರಿ ಅವರು, ಆರೋಪಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಿ, ಸಿಬಿಐ ಅಧಿಕಾರಿಗಳು ಯಾವುದಾದರೂ ತೊಂದರೆ ನೀಡಿದರೆ? ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು.
ಬಳಿಕ ಸಿಬಿಐ ಅಧಿಕಾರಿಗಳು, ತಮ್ಮ ವಶದಲ್ಲಿದ್ದ ವಿನಯ ಕುಲಕರ್ಣಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿರುವ ಕುರಿತು ವರದಿ ನೀಡಿದರು.
ಅದನ್ನು ಪರಿಶೀಲಿಸಿದ ನ್ಯಾಯಾಧೀಶರು, ವಿನಯ ಕುಲಕರ್ಣಿಯನ್ನು ೧೪ ದಿನ ಅಂದರೆ ನ. ೨೩ರವರೆಗೆ ನ್ಯಾಯಾಂಗ ವಶಕ್ಕೆ ನೀಡಿ ಆದೇಶ ಮಾಡಿ ವಿಚಾರಣೆ ಮುಂದೂಡಿದರು.