ಧಾರವಾಡ prajakiran.com : ಧಾರವಾಡದ
ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಹಯೋಗದಲ್ಲಿ ಸಾಹಿತಿ ಸೋಮು ರೆಡ್ಡಿ ರಚಿಸಿ, ಸಹ ನಿರ್ದೇಶಿಸಿರುವ ’ದ್ವಂದ್ವ’ ನಾಟಕ ಡಿಸೆಂಬರ್ ೧೯, ೨೦೨೧ ರವಿವಾರ ಸಂಜೆ ೦೬ ಗಂಟೆಗೆ ಸೃಜನಾ ರಂಗಮಂದಿರದಲ್ಲಿ ಪ್ರದರ್ಶನ ಕಾಣಲಿದೆ.
ನಿರುದ್ಯೋಗಿ ಮಗ ಮತ್ತು ಸರ್ಕಾರಿ ನೌಕರಿಯಲ್ಲಿರುವ ರೋಗಿ ತಂದೆಯ ನಡುವೆ ನಡೆಯುವ ಮಾನಸಿಕ ಸಂಘರ್ಷದ ಎಳೆಯನ್ನು ಹೊಂದಿರುವ ಕಥನ ಇದಾಗಿದ್ದು ವಾಸ್ತವದ ಕೌಟುಂಬಿಕ ತಲ್ಲಣಗಳನ್ನೂ ತೆರೆದಿಡುತ್ತಾ ಪ್ರಯೋಗದಿಂದ ಪ್ರಯೋಗಕ್ಕೆ ಪ್ರೇಕ್ಷಕರನ್ನ ಆಕರ್ಷಿಸುತ್ತಿದೆ.
ಕೇವಲ ಐದು ಪಾತ್ರ ; ೯೦ ನಿಮಿಷ ಅವಧಿ ಹೊಂದಿದೆ. ವಿಜಯೀಂದ್ರ ಅರ್ಚಕ ಅವರ ನಿರ್ದೇಶನ, ಡಾ. ಶ್ರೀಧರ ಕುಲಕರ್ಣಿ ಅವರ ಸಂಗೀತ, ಸಂತೋಷ ಮಹಾಲೆ ಅವರ ಪ್ರಸಾದನ, ರತ್ನಾ ಅರ್ಚಕ ಅವರ ವಸ್ತ್ರ ವಿನ್ಯಾಸ ಈ ನಾಟಕಕ್ಕಿದೆ.
ಮುಖ್ಯ ತಾರಾಗಣದಲ್ಲಿ ಸಿ.ಎಸ್ ಪಾಟೀಲ್ಕುಲಕರ್ಣಿ, ಪವನ್ ದೇಶಪಾಂಡೆ, ಚೈತನ್ಯ ಕುಲಕರ್ಣಿ ಇದ್ದಾರೆ.
ನಾಟಕ ಆರಂಭದ ಮುನ್ನ ಹದಿನೈದು ನಿಮಿಷಗಳ ವೇದಿಕೆ ಕಾರ್ಯಕ್ರಮವಿದ್ದು ಧಾರವಾಡದ ಉಪವಿಭಾಗಧಿಕಾರಿ ಡಾ. ಗೋಪಾಲ ಕೃಷ್ಣ ಬಿ. ಉದ್ಘಾಟನೆ ಮಾಡಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿಯ ಇಲಾಖೆ ಧಾರವಾಡದ ಸಹಾಯ ನಿರ್ದೇಶಕಿ ಮಂಜುಳಾ ಯಲಿಗಾರ ಅಧ್ಯಕ್ಷತೆ ವಹಿಸಲಿದ್ದಾರೆ.
ಕ.ವಿ.ವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹಗೇದಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ,
ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಉಪಸ್ಥಿತರಿರುತ್ತಾರೆ ಎಂದು ಸೊಸೈಟಿಯ ಅಧ್ಯಕ್ಷ ಪ್ರಕಾಶ ಬಾಳಿಕಾಯಿ ತಿಳಿಸಿದ್ದಾರೆ