ಧಾರವಾಡ prajakiran. com ಜುಲೈ 02: ಇಂದು ಜುಲೈ 2 ಶುಕ್ರವಾರ ಸಂಜೆ 7 ಗಂಟೆಯಿಂದ ಜುಲೈ 05 ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಿಲ್ಲೆಯಾದ್ಯಂತ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರಭಾರ ಜಿಲ್ಲಾಧಿಕಾರಿಗಳೂ ಆಗಿರುವ ಡಾ.ಬಿ.ಸುಶೀಲ ತಿಳಿಸಿದ್ದಾರೆ.
ಜೂನ್ 20 ರಂದು ಹೊರಡಿಸಿದ ಆದೇಶದ ಅನುಬಂಧ (2)ರಲ್ಲಿ ತಿಳಿಸಿರುವಂತೆ ನಾಳೆ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ದಿನಸಿ, ತರಕಾರಿ, ಹಾಲು, ಮಾಂಸಾಹಾರ, ಪ್ರಾಣಿಗಳಿಗೆ ಆಹಾರ ಮತ್ತಿತರ ಅಗತ್ಯವಸ್ತುಗಳು ಮತ್ತು ಮದ್ಯ ಮಾರಾಟಕ್ಕೆ ಅವಕಾಶವಿರುತ್ತದೆ.
ಈ ಅವಧಿಯಲ್ಲಿ ಬೀದಿ ಬದಿ ವ್ಯಾಪಾರ ಚಟುವಟಿಕೆಗಳು ನಡೆಯಲಿವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ನಡೆಯಲಿದೆ.
ಹೋಟೆಲ್ಗಳು ಈ ಅವಧಿಯಲ್ಲಿ ಕೇವಲ ಪಾರ್ಸೆಲ್ ಸೇವೆ ನೀಡಬಹುದಾಗಿದೆ. ಹೋಂ ಡೆಲೆವರಿ ವಹಿವಾಟುಗಳಿಗೆ ಅವಕಾಶವಿದೆ. ವ್ಯಾಪಾರಿಗಳು ಕೋವಿಡ್-19 ರ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ತುರ್ತು ಸೇವೆ ನೀಡುವ ಚಟುವಟಿಕೆಗಳು ಹಾಗೂ ಕೈಗಾರಿಕೆ ಸಂಸ್ಥೆಗಳ ಕಾರ್ಯಗಳಿಗೆ ಅವಕಾಶವಿರುತ್ತದೆ. ಟೆಲಿಕಾಂ ಮತ್ತು ಅಂತರ್ಜಾಲ ಸೇವೆ ನೀಡುವ ಸಂಸ್ಥೆಗಳ ಅಗತ್ಯ ಸಿಬ್ಬಂದಿ ಮಾತ್ರ ಸಂಚರಿಸಬಹುದು.
ಉಳಿದವರು ಮನೆಯಿಂದ ಕೆಲಸ ನಿರ್ವಹಿಸಬೇಕು. ರೋಗಿಗಳ ಆರೈಕೆದಾರರು, ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳಲು ಅಗತ್ಯ ದಾಖಲೆಗಳೊಂದಿಗೆ ಉದ್ದೇಶಿತ ಕಾರ್ಯಕ್ಕೆ ತೆರಳಬಹುದು.
ಬಸ್, ರೈಲು ಹಾಗೂ ವಿಮಾನಗಳ ಸಂಚಾರ ಇರಲಿದೆ. ಕಡಿಮೆ ಸಂಖ್ಯೆಯಲ್ಲಿ ಬಸ್ಗಳು ರಸ್ತೆಗಿಳಿಯಲಿವೆ. ಮಧ್ಯಾಹ್ನ 2 ಗಂಟೆಯ ನಂತರ ಅನಗತ್ಯ ವಾಹನ ಸಂಚಾರಕ್ಕೆ ಅವಕಾಶವಿಲ್ಲ.
ಈಗಾಗಲೇ ಅನುಮತಿ ಪಡೆದಿರುವ ಮದುವೆ ಸಮಾರಂಭಗಳನ್ನು 40 ಕ್ಕಿಂತ ಹೆಚ್ಚು ಜನರು ಸೇರದೆ ಆಯೋಜಿಸಬಹುದು. ಅಂತ್ಯಕ್ರಿಯೆಗಳಲ್ಲಿ ಗರಿಷ್ಠ 5 ಜನ ಮಾತ್ರ ಭಾಗವಹಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.