ಧಾರವಾಡ prajakiran. com : ವಿಶ್ವ ಮಧುಮೇಹ ದಿನದ ಅಂಗವಾಗಿ ಧಾರವಾಡ ರೋಟರಿ ಮಿಡ್ಟೌನ್ ವತಿಯಿಂದ ಶನಿವಾರ ನಗರದ ಐ.ಎಂ.ಎ. ಸಭಾಭವನದಲ್ಲಿ ಸಕ್ಕರೆ ಕಾಯಿಲೆ ರೋಗಿಗಳಿಗೆ ಉಚಿತ ಗ್ಲುಕೋ ಮೀಟರ್ ವಿತರಣೆ ಮಾಡಲಾಯಿತು.
ವಿಶ್ವ ಮಧುಮೇಹ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ರೋಟರಿ ಡಿಸ್ಟ್ರಿಕ್ಟ್-೩೧೭೦ ಗವರ್ನರ್ ರೋ. ಗೌರೀಶ ದೊಂಡ ಗ್ಲುಕೋ ಮೀಟರ್ ವಿತರಿಸಿ, ಮಧುಮೇಹ ಕಾಯಿಲೆ ಪ್ರಸ್ತುತ ಸಾಮಾನ್ಯ ಎನ್ನುಷ್ಟು ವ್ಯಾಪಿಸಿದೆ.
ಸರಳ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ಕಡಿಮೆ ಒತ್ತಡದ ಬದುಕಿನ ಶೈಲಿ ಅಳವಡಿಸಿಕೊಂಡರೆ ಮಧುಮೇಹದಿಂದ ದೂರವಿರಬಹುದು.
ಸಕ್ಕರೆ ಕಾಯಿಲೆ ಇದ್ದವರು ಕೂಡ ಅಗತ್ಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಪಾಯದಿಂದ ಪಾರಾಗಬಹುದು ಎಂದರು.
ವಿಶ್ವ ಮಧುಮೇಹ ದಿನದ ಹಿನ್ನಲೆಯಲ್ಲಿ ಧಾರವಾಡ ರೋಟರಿ ಮಿಡ್ಟೌನ್ ಉಚಿತ ಗ್ಲುಕೋ ಮೀಟರ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ರೋ.ಡಾ.ಕವನ ದೇಶಪಾಂಡೆ, ಪ್ರತಿಭಾ ದೊಂಡ, ಧಾರವಾಡ ರೋಟರಿ ಮಿಡ್ಟೌನ್ ಅಧ್ಯಕ್ಷ ಶ್ರೀಧರ ಕಲ್ಲೂರ, ಕಾರ್ಯದರ್ಶಿ ಹರ್ಷ ತುರಮರಿ, ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಐದು ಟ್ಯಾಬ್ಗಳನ್ನು ಕೊಡುಗೆಯಾಗಿ ನೀಡಲಾಯಿತು.
ರೋಟರಿ ಮಿಡ್ಟೌನ್ ಖಜಾಂಚಿ ಡಾ.ಪ್ರಕಾಶ ರಾಮನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರೊ.ಎಸ್.ವೈ.ಹೊನ್ನಣ್ಣವರ ನಿರೂಪಿಸಿ, ವಂದಿಸಿದರು. ವಿಜಯಕುಮಾರ ನೀಲರಡ್ಡಿ, ಸಂಗನಗೌಡ ರಾಮನಗೌಡರ, ಅಮೃತ ಕಬಾಡೆ, ಪ್ರಕಾಶ ಧರಣೆಪ್ಪನವರ, ಶಿವಯೋಗಿ ಅಮಿನಗಡ ಇನ್ನಿತರರು ಉಪಸ್ಥಿತರಿದ್ದರು.