ಧಾರವಾಡ prajakiran. com : ವಿಶ್ವ ಮಧುಮೇಹ ದಿನದ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘದ (ಐ.ಎಂ.ಎ.) ಧಾರವಾಡ ಘಟಕದ ವತಿಯಿಂದ ನಗರದಲ್ಲಿ ರವಿವಾರ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ನಡಿಗೆ ಮತ್ತು ಓಟ ಹಮ್ಮಿಕೊಳ್ಳಲಾಗಿತ್ತು.
ಮಧುಮೇಹ ಕಾಯಿಲೆ ಹಾಗೂ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ೩ ಕಿ.ಮೀ. ನಡಿಗೆ ಮತ್ತು ೫ ಕಿ.ಮೀ ಓಟ ಹಮ್ಮಿಕೊಳ್ಳಲಾಗಿತ್ತು.
ನಗರದ ಐ.ಎಂ.ಎ. ಸಭಾಭವನದಿಂದ ಬೆಳಗ್ಗೆ ಆರಂಭವಾದ ನಡಿಗೆ ಮತ್ತು ಓಟವು ಸಪ್ತಾಪೂರ ಬಾವಿ ಮೂಲಕ ಶ್ರೀನಗರ ಸರ್ಕಲ್ ತಲುಪಿ ಬಳಿಕ ಐ.ಎಂ.ಎ. ಸಭಾಭವನಕ್ಕೆ ಮರಳಿತು.
ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಮಾತ್ರ ಭಾಗವಹಿಸಿದ್ದ ನಡಿಗೆ ಮತ್ತು ಓಟದ ಸಂದರ್ಭದಲ್ಲಿ ಮಧುಮೇಹದ ಬಗ್ಗೆ ಜಾಗೃತಿ, ನಿಯಂತ್ರಣ ಮಾರ್ಗೋಪಾಯಗಳು ಮತ್ತು ಕೊರೊನಾ ಲಸಿಕೆ ಕುರಿತ ಫಲಕಗಳನ್ನು ಪ್ರದರ್ಶಿಸಲಾಯಿತು.
ಐ.ಎಂ.ಎ. ಅಧ್ಯಕ್ಷ ಡಾ.ಸಂದೀಪ ನೀರಲಗಿ, ಕಾರ್ಯದರ್ಶಿ ಡಾ.ಅಮಿತ ಗಲಗಲಿ, ಡಾ.ಎಸ್.ಆರ್.ಜಂಬಗಿ, ಡಾ.ನಾಡಗೌಡ, ಡಾ.ಪ್ರಕಾಶ ರಾಮನಗೌಡರ, ಡಾ.ರವೀಂದ್ರ ಜೋಶಿ, ಡಾ.ಕಿರಣ ಕುಲಕರ್ಣಿ, ಡಾ.ಸತೀಶ ಇರಕಲ್ಲ, ಡಾ.ಶಿಶಿರ ದೇವರಾಜು, ಡಾ.ನವೀನ ಮಂಕಣಿ, ಡಾ.ಕುಂಬಾರ, ಡಾ.ಶ್ರೀಕಂಠ ರಾಮನಗೌಡರ ಇನ್ನಿತರರು ಭಾಗವಹಿಸಿದ್ದರು.
ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ತೇಜಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಭಾರತೀಯ ವೈದ್ಯಕೀಯ ಸಂಘದ ಮಹಿಳಾ ವಿಭಾಗದ ಜಂಟಿ ಆಶ್ರಯದಲ್ಲಿ ವಾಯುವಿಹಾರಿಗಳಿಗೆ ಡಾ.ಸಂಧ್ಯಾ ಕುಲಕರ್ಣಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ೨೦೦ ಕ್ಕೂ ಅಧಿಕ ಜನರ ಉಚಿತ ಮಧುಮೇಹ ತಪಾಸಣೆ ನಡೆಸಲಾಯಿತು.