ಧಾರವಾಡ prajakiran.com : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಇಬ್ಬರನ್ನು ಧಾರವಾಡದ ಉಪನಗರ ಠಾಣೆಯ ಪೊಲೀಸರು ಸಪ್ತಾಪೂರ ಬಡಾವಣೆಯಲ್ಲಿ ಬಂಧಿಸಿದ್ದಾರೆ.
ಧಾರವಾಡ ತಾಲೂಕಿನ ತಡಸಿನಕೊಪ್ಪ ಗ್ರಾಮದ ಅವಿನಾಶ ಉರ್ಫ್ ಅವಿ ಚವ್ಹಾಣ ಮತ್ತು ಕೆಲಗೇರಿ ಆಂಜನೇಯ ನಗರದ ಮಂಜುನಾಥ ವಾಲೀಕಾರ ಬಂಧಿತ ಆರೋಪಿಗಳು.
ಬಂಧಿತರಿಂದ ೭,೬೦,೧೦೦ ಲಕ್ಷ ರೂಪಾಯಿ ನಗದು ಮತ್ತು ಮೂರು ಮೊಬೈಲ್ಗಳನ್ನು ದಾಳಿ ವೇಳೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿಗಳು ಸಪ್ತಾಪೂರ ಬಡಾವಣೆಯ ಆಸ್ಪತ್ರೆಯ ರಸ್ತೆ ಬದಿಯಲ್ಲಿ ಶಾರ್ಜಾದಲ್ಲಿ ನಡೆಯುತ್ತಿದ್ದ ಐಪಿಎಲ್ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು ಎಂದು ಪೊಲೀಸರು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿದ್ದಾರೆ.
ಧಾರವಾಡ ಎಸಿಪಿ ಜಿ.ಅನುಷಾ ಅವರ ಮಾರ್ಗದರ್ಶನದಲ್ಲಿ ಉಪನಗರ ಠಾಣೆಯ ಸಿಪಿಐ ಪ್ರಮೋದ ಯಲಿಗಾರ ಅವರ ನೇತೃತ್ವದಲ್ಲಿ ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ, ಸಿಬ್ಬಂದಿಗಳಾದ ಬಸವರಾಜ ಮಾಗುಂಡನವರ, ಕೆ.ಎಂ.ಡೊಕ್ಕನವರ, ಆರ್.ಎಚ್.ಬಡ್ನಿ, ಯು.ಡಿ.ಬಂಗಾರಿ, ಚೇತನ ಇಂಗಳಗಾವಿ ಮತ್ತು ಆನಂದ ಬಡಿಗೇರ ದಾಳಿ ನಡೆಸಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಧಾರವಾಡ ಉಪನಗರ ಠಾಣೆ ಪೊಲೀಸರು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.