ಧಾರವಾಡ ಪ್ರಜಾಕಿರಣ.ಕಾಮ್ : ಮಾ.03 : ರೇವಡಿಹಾಳ ನಿವಾಸಿಯಾದ ಸಿದ್ದಪ್ಪ ಚಿಕ್ಕಮ್ಮನ್ನವರ ಸಮರ್ಥ ಅಸೋಸಿಯೇಟ್ಸ್ (ಪ್ರಮೋಟರ್ ಮತ್ತು ಡೆವಲಪರ್ಸ್) ರವರ ಸಮರ್ಥ ಬಡಾವಣೆ ಫೇಸ್ 2, ಪ್ಲಾಟ ನಂ.56 30×40 ಅಳತೆಯುಳ್ಳ ಖುಲ್ಲಾ ಜಾಗವನ್ನು ರೂ.1,30,000/-ಗಳನ್ನು ಮುಂಗಡವಾಗಿ ಕೊಟ್ಟು ಖರೀದಿ ಒಪ್ಪಂದ ಮಾಡಿಕೊಂಡಿದ್ದರು.
ಅದರಂತೆ ಎದುರುದಾರರು 2-3 ವರ್ಷಗಳಲ್ಲಿ ಲ್ಯಾಂಡ್ ಅಭಿವೃದ್ಧಿಪಡಿಸಿ ಪ್ಲಾಟ ಕೊಡುವುದಾಗಿ ಭರವಸೆ ನೀಡಿದ್ದರು.
ಕಾರಣಾಂತರಗಳಿಂದ 2019ರಲ್ಲಿ ದೂರುದಾರರು ತಮ್ಮ ನಿರ್ಧಾರವನ್ನು ಬದಲಿಸಿ 2019ರಲ್ಲಿ ಪ್ಲಾಟ್ ರದ್ದುಪಡಿಸುವ ಕುರಿತು ಎದುರುದಾರರಿಗೆ ಪತ್ರ ಬರೆದುಕೊಟ್ಟಿದ್ದರು.
ಮುಂಗಡ ಹಣ ರೂ.1 ಲಕ್ಷ 30 ಸಾವಿರದಲ್ಲಿ ಎದುರುದಾರರು ರೂ.75,000/-ಗಳನ್ನು ದೂರುದಾರರಿಗೆ ಹಿಂದಿರುಗಿಸಿದ್ದರು.
ಇವತ್ತಿನವರೆಗೂ ಬಾಕಿ ಹಣ ರೂ.55,000/- ಮರಳಿ ನೀಡಿರುವುದಿಲ್ಲ. ಕಾರಣ ಎದುರುದಾರರಿಂದ ಸೇವಾ ನ್ಯೂನ್ಯತೆ ಆಗಿದೆ ಎಂದು ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು ಸಿ. ಹಿರೇಮಠ ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಸಮರ್ಥ ಅಸೋಸಿಯೇಟ್ಸ್ (ಪ್ರಮೋಟರ್ ಮತ್ತು ಡೆವಲಪರ್ಸ್) ಬಾಕಿ ಹಣವನ್ನು ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಆ ಹಣವನ್ನು ಕರಾರಿನ ಪ್ರಕಾರ ದೂರುದಾರರಿಗೆ ಹಿಂದಿರುಗಿಸದೇ ಎದುರುದಾರರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ದಿ:02/04/2018 ರಿಂದ ರೂ.55,000/-ಮೇಲೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಹಿಂದಿರುಗಿಸಲು ಆಯೋಗ ತಿಳಿಸಿದೆ.
ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗೆ ರೂ.50,000/- ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ರೂ.10,000/-ಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಆಯೋಗ ತೀರ್ಪು ನೀಡಿದೆ.