ಕಾರವಾರ prajakiran.com : ಬೆಳಗ್ಗೆ ಒಂಬತ್ತುಗಂಟೆಯಿಂದ ರಾತ್ರಿ ಎಂಟು ಗಂಟೆ ದಾಟಿದರೂ ಜಿಲ್ಲಾಧಿಕಾರಿ ಕಚೇರಿ ಬಿಟ್ಟು ತೆರಳದೇ ಕುಳಿತಲ್ಲೇ ಕುಳಿತು, ಕೆಲಸ ಆಗುವ ವರೆಗೂ ಧರಣಿ ಕೂರ್ತೀನಿ, ಇಂದು ಎಲ್ಲಿಗೂ ಹೋಗೊಲ್ಲ ಎಂದು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಪಟ್ಟು ಹಿಡಿದ ಘಟನೆ ಗುರುವಾರ ನಡೆದಿದೆ.
ಅವರುನಿನ್ನೇ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಟ್ಟು ಹಿಡಿದು ಕುಳಿತು ಜಡ್ಡು ಹಿಡಿದ ಅಧಿಕಾರಿಗಳಿಗೆ ತೀವ್ರ ತರಾಟೆ ತೆಗೆದುಕೊಂಡು ಕುಳಿತಲ್ಲೇ ಕುಳಿತು ಅಧಿಕಾರಿಗಳಿಗೆ ಬಿಸಿ ತಾಕಿಸಿದರು.
ಜಿಲ್ಲೆಯಲ್ಲಿನ 231 ಗ್ರಾಮಪಂಚಾಯ್ತಿಗಳಿಗೆ ಉಚಿತ ಬಿ.ಎಸ್.ಎನ್.ಎಲ್ ವೈಫೈ ನೀಡಿರುವ ಕುರಿತು ಮಾಹಿತಿ ಪಡೆದರು.
ಈ ವೇಳೆ ಜಿಲ್ಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೂ ವೈ.ಪೈ ನೀಡಲಾಗಿದ್ದು ಕಾರ್ಯನಿರ್ವಹಿಸುತ್ತಿದೆ ಎಂದು ಬಿ.ಎಸ್.ಎನ್.ಎಲ್ . ಜನರಲ್ ಮ್ಯಾನೇಜರ್ ಆರ್.ವಿ ಜನ್ನು ಮಾಹಿತಿ ನೀಡಿದರು.
ಆದರೆ ಜಿಲ್ಲೆಯಲ್ಲಿ ಉಚಿತ ವೈ.ಫೈ ನೀಡಿರುವುದು ಕೇವಲ 148 ಗ್ರಾಪಂ ಗಳಲ್ಲಿ ಮಾತ್ರ. 62 ರಲ್ಲಿ ಕಾರ್ಯನಿರ್ವಹಿಸುತ್ತಿರಲಿಲ್ಲ
.ಹೀಗಾಗಿ ಗರಂ ಆದ ಸಂಸದ ಅನಂತಕುಮಾರ್ ಹೆಗಡೆ ಸಂಜೆ ಆರು ಗಂಟೆಗೆ ಮುಗಿಯಬೇಕಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂದೇ ಎಲ್ಲಾ ಸರಿಯಾಗಬೇಕು.
ಅಲ್ಲಿವರೆಗೂ ಕಚೇರಿ ಬಿಟ್ಟು ನಾನೂ ತೆರಳುವುದಿಲ್ಲ ನೀವೂ ತೆರಳುವಂತಿಲ್ಲ ಎಂದು ಪಟ್ಟು ಹಿಡಿದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲೇ ಕುಳಿತಿದ್ದರು.
ಇದರಿಂದಾಗಿ ಕೆಲಕಾಲ ಬಿಎಸ್.ಎನ್ .ಎಲ್ ಅಧಿಕಾರಿಗಳು ಕಕ್ಕಾ ಬಿಕ್ಕಿಯಾದರು. ಅಧಿಕಾರಿಗಳು ಸಂಸದರ ಈ ಧಿಡೀರ್ ನಿರ್ಧಾರದಿಂದ ಏನ್ ಮಾಡಬೇಕು ಎಂದು ದಿಕ್ಕು ತೋಚದೆ ತಲೆಕೆಡಿಸಿಕೊಂಡರು. ಆನಂತರ ಸಂಸದರನ್ನು ಓಲೈಸುವ ಕೆಲಸದಲ್ಲಿ ಕೊನೆಗೂ ಸಫಲರಾದರು.
ನಂತರ ಮಂಗಳವಾರದ ವರೆಗೆ ಗಡುವು ನೀಡಿ ಒಂಬತ್ತುಗಂಟೆ ನಂತರ ಅಧಿಕಾರಿಗಳಿಗೆ ತೆರಳಲು ಅನುವುಮಾಡಿಕೊಟ್ಟರು.