ಧಾರವಾಡ prajakiran.com : ಮೋಹನ್ ವಾಳ್ವೆಕರ್ ಅಲಿಯಾಸ್ ಚೀಟರ್ ಮೋನ್ಯಾಗೆ ಸುಪ್ರೀಂಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ತಲಾ ಒಂದು ಲಕ್ಷ ರೂಪಾಯಿ ಬಾಂಡ್ ನ ಇಬ್ಬರು ಜಾಮೀನುದಾರರು, ನ್ಯಾಯಾಲಯಕ್ಕೆ ತಪ್ಪದೆ ಹಾಜರಾಗುವುದು ಹಾಗೂ ಯಾವುದೇ ಸಾಕ್ಷಿದಾರರಿಗೆ ಬೆದರಿಕೆ ಹಾಕುವುದು ಮಾಡದಂತೆ, ಒತ್ತಡ ಹೇರದಂತೆ ಮತ್ತು ಟ್ಯಾಂಪರ್ ಮಾಡದಂತೆ ಸೂಚಿಸಿದೆ.
ಜೊತೆಗೆ ಭವಿಷ್ಯದಲ್ಲಿ ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗದಂತೆ, ನ್ಯಾಯಾಲಯದ ಪರವಾನಿಗೆ ಇಲ್ಲದೆ ಅದರ ವ್ಯಾಪ್ತಿ ಬಿಟ್ಟು ಹೋಗದಂತೆ ಷರತ್ತು ವಿಧಿಸಿ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಹೀಗಾಗಿ ಕಳೆದ ಹಲವಾರು ತಿಂಗಳಿಂದ ಧಾರವಾಡದ ಕೇಂದ್ರ ಕಾರಾಗೃಹದಲ್ಲಿದ್ದ ಮೋಹನ್ ವಾಳ್ವೆಕರ್ ಅಲಿಯಾಸ್ ಚೀಟರ್ ಮೋನ್ಯಾ ಕೊನೆಗೂ ಧಾರವಾಡ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ.
ಈತನ ಮೇಲೆ ಧಾರವಾಡದ ಉಪನಗರ ಪೊಲೀಸ್ ಠಾಣೆಯೊಂದರಲ್ಲಿಯೇ ಹಲವಾರು ಮೋಸ, ವಂಚನೆ ಪ್ರಕರಣಗಳಿದ್ದು, ಕೆಲವೊಂದು ವಿಚಾರಣೆ ಹಂತದಲ್ಲಿದ್ದು, ಇನ್ನೂ ಕೆಲವು ಮುಕ್ತಾಯಗೊಂಡಿವೆ.
ಚೀಟಿಂಗ್ ನಿಂದಲೇ ಕುಖ್ಯಾತಿ ಗಳಿಸಿದ್ದ ಈತನನ್ನು ಈ ಹಿಂದೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಜಿಲ್ಲೆಯಿಂದ ಗಡಿಪಾರು ಮಾಡಿದ್ದರು. ಆದರೂ ವಂಚನೆ ಮಾಡಿ ಪ್ರಕರಣವೊಂದರಲ್ಲಿ ಪೊಲೀಸರಿಗೆ ತಗುಲು ಹಾಕಿಕೊಂಡಿದ್ದರಿಂದ ಜೈಲು ಪಾಲಾಗಿದ್ದ.
ಈ ಹಿಂದೆ ಈತನಿಗೆ ಧಾರವಾಡ ಜಿಲ್ಲಾ ನ್ಯಾಯಾಲಯ ಹಾಗೂ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದ್ದವು. ಹೀಗಾಗಿ ಈತ ಸುಪ್ರೀಂಕೋರ್ಟ್ ಮೊರೆ ಹೋಗಿ, ಕೊನೆಗೂ ಜಾಮೀನು ಪಡೆದು ಹೊರಬಂದಿದ್ದಾನೆ.