ಬೆಂಗಳೂರು prajakiran.com : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಸಂಸದ ಡಿ.ಕೆ. ಸುರೇಶ ಸೇರಿ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಸೋಮವಾರ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿದ್ದಾರೆ.
ಆ ಮೂಲಕ ಡಿಕೆ ಬ್ರದರ್ಸ್ ಗೆ ಬಿಗ್ ಶಾಕ್ ನೀಡಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದ ಮೇಲೆ, ಕನಕಪುರ ತಾಲೂಕಿನ ದೊಡ್ಡ ಆಲದಹಳ್ಳಿ ಮನೆ, ಡಿಕೆ ಸುರೇಶ ಮನೆ ಸೇರಿದಂತೆ ಡಿಕೆಶಿ ಆಪ್ತ ಶಶಿಧರ್ ಶಿವಣ್ಣ ಸೇರಿ ಹಲವು ಕಡೆ ದಾಳಿ ನಡೆಸಿದ್ದಾರೆ.
60ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳ ತಂಡ ಬೆಳಗ್ಗೆಯಿಂದ ಮಹತ್ವದ ದಾಖಲೆ ಪರಿಶೀಲನೆ ನಡೆಸುತ್ತಿದೆ. ಸಿಬಿಐ ತಂಡ ದಾಳಿ ನಡೆಸಿದ್ದರಿಂದ ಆಪ್ತರು, ಅಭಿಮಾನಿಗಳು, ಕುಟುಂಬಸ್ಥರು ಬೆಚ್ಚಿಬಿದ್ದಿದ್ದು, ಆತಂಕಗೊಂಡಿದ್ದಾರೆ.
ಬೆಳಗ್ಗೆ 6 ಗಂಟೆಯಿಂದಲೇ ದಾಖಲೆ ಪರಿಶೀಲನೆ ಕಾರ್ಯ ನಡೆದಿದ್ದು, ಮುಂದುವರೆದಿದೆ. ಸಿಬಿಐ ಎಸ್ಪಿ ಥಾಮಸನ್ ಜೋಸ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.ಹೈದ್ರಾಬಾದ್, ಚೈನ್ನೈ, ದೆಹಲಿಯಿಂದ ಕೂಡ ಸಿಬಿಐ ಅಧಿಕಾರಿಗಳ ತಂಡ ಈ ದಾಳಿಯಲ್ಲಿ ಭಾಗವಹಿಸಿದ್ದಾರೆ.
ಇತ್ತೀಚೆಗಷ್ಟೇ ಡಿಕೆಶಿ ಆಪ್ತ ಶಶಿಧರ್ ಶಿವಣ್ಣ ಇತ್ತೀಚೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಆದರೆ ಪ್ರಕರಣ ಇನ್ನು ನೋಟಿಸ್ ಹಂತದಲ್ಲಿರುವುದರಿಂದ ಸಿಬಿಐ ಈ ಶಾಕ್ ನೀಡಿದೆ.