ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ತಂಡ ಹಲವರನ್ನು ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಶುಕ್ರವಾರವೂ ವಿಚಾರಣೆ ಮುಂದುವರೆದಿದೆ. ಗುರುವಾರ ನಿವೃತ್ತ ಡಿವೈಎಸ್ಪಿ ಅವರ ಮಗ ಕಿರಣ ವೀರನಗೌಡ ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು ಎಂದು ಗೊತ್ತಾಗಿದೆ.
ಈತ ಪೊಲೀಸ್ ಇಲಾಖೆಯ ಹಿರಿಯಅಧಿಕಾರಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಎಂದು ತಿಳಿದುಬಂದಿದೆ.
ಈ ಹಿಂದಿನ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಹಾಗೂ ಸದ್ಯ ನಿವೃತ್ತರಾಗಿರುವ ಪಾಂಡುರಂಗ ರಾಣೆ, ಡಿಸಿಪಿ ಜಿನೇಂದ್ರ ಖಣಗಾವಿ ಸೇರಿದಂತೆ, ಹುಬ್ಬಳ್ಳಿ-ಧಾರವಾಡದ ಬಹುತೇಕ ಪೊಲೀಸ್ ಅಧಿಕಾರಿಗಳ ಬೇನಾಮಿ ವ್ಯವಹಾರ, ಹಣಕಾಸಿನ ಹೊಂದಾಣಿಕೆ, ಹವಾಲಾ ವರ್ಗಾವಣೆ, ತಿಂಗಳ ವಂತಿಗೆ ಸೇರಿದಂತೆ ಪ್ರಕರಣದಿಂದ ಸುಗಮವಾಗಿ ಹೊರಬರುವಂತೆ ನೋಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಕಿರಣ ವೀರನಗೌಡರ ಅವರನ್ನು ತೀವ್ರ ವಿಚಾರಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದರೊಂದಿಗೆ ಈ ಹಿಂದೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಹಲವರಿಗೆ ನೌಕರಿ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದ ಅರ್ಜುನ ಗುಡ್ಡದ ನನ್ನು ಕೂಡ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಇತ ಕೂಡ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಒಡನಾಟ ಹೊಂದಿದ್ದ. ಅಲ್ಲದೆ, ಡಿಸಿಪಿ ಖಣಗಾವಿ ಊರಿನವರಾಗಿದ್ದಾನೆ. ಈತ ಅವರೊಂದಿಗೆ ನಿರಂತರ ದೂರವಾಣಿ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಹೀಗಾಗಿ ಇಬ್ಬರನ್ನು ಸಿಬಿಐ ಅಧಿಕಾರಿಗಳು ಡ್ರಿಲಿಂಗ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಮಾಜಿ ಸಚಿವರೊಂದಿಗೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮುತ್ತಣ್ಣ ಬಳ್ಳಾರಿ, ಶಿವಾನಂದ ಮೆಣಸಿನಕಾಯಿ, ಯರಿಕೊಪ್ಪ ಹನುಮಂತ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.