ಮೈಸೂರು prajakiran.com : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ದೊಡ್ಡ ಬ್ರಹ್ಮಾಸ್ತ್ರ ಬಿಡುವುದಾಗಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಅವರು ಮಂಗಳವಾರ
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯಕ್ಕೆ ಒಳಿತಾಗಲಿ ಎಂದು ನಾನು ಹೋರಾಡುತ್ತಿದ್ದೇನೆ. ದಾಖಲೆ ಬಿಡುಗಡೆಯಾದರೆ ಬಿ ಎಸ್ ವೈ ಪರ ಬ್ಯಾಟ್ ಮಾಡುತ್ತಿರುವ ಮಠಾಧೀಶರು ಕೂಡ ಮಠ ಬಿಟ್ಟು ಓಡಿ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನನ್ನ ಬಳಿ ಸಾಕಷ್ಟು ದಾಖಲೆಗಳಿವೆ. ಶೀಘ್ರದಲ್ಲಿಯೇ ದಾಖಲೆ ಸಮೇತ ಬಿಡುಗಡೆ ಮಾಡುವುದಾಗಿ ಹೇಳಿದರು.
ನಾನು ಕುರುಕ್ಷೇತ್ರದ ಅಭಿಮನ್ಯುವಲ್ಲ , ಅರ್ಜುನನಾಗುತ್ತೇನೆ. ಈಗ ವನವಾಸ, ಅಜ್ನಾತವಾಸ ಎಲ್ಲವೂ ಮುಗಿದಿದೆ.
ಇನ್ನೇನಿದ್ದರೂ ಪಟ್ಟಾಭಿಷೇಕ ಮಾಡಿಸುವ ಕೆಲಸ ಮಾತ್ರ ಬಾಕಿಯಿದೆ ಎಂದು ನಾಯಕತ್ವ ಬದಲಾವಣೆಯಾಗುವ ಸುಳಿವು ನೀಡಿದರು.
ನಾನು ಏಕಾಂಗಿಯಲ್ಲ, ಬಹಳಷ್ಟು ಸಚಿವರು,ಶಾಸಕರು ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಎಲ್ಲರೂ ನನ್ನ ಹೋರಾಟ ನ್ಯಾಯುತವಾಗಿದೆ, ಹೋರಾಟ ಮುಂದುವರೆಸಿ ಎಂದು ಹೇಳಿದ್ದಾರೆ. ಕೆಲವೆ ದಿನಗಳಲ್ಲಿ ನನ್ನ ಹೋರಾಟಕ್ಕೆ ಫಲ ಸಿಗಲಿದೆ.
ಬಾಯಿಮಾತಿನಲ್ಲಿ ನಾನು ಹೇಳಿಕೆ ನೀಡುತ್ತೇನೆ ಎಂದು ಹೇಳುವವರಿಗೆ ದಾಖಲೆ ಮೂಲಕವೇ ಉತ್ತರ ಕೊಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.