ಶಾಲಾ ಮಕ್ಕಳಿಗೆ ಎಣ್ಣೆ, ಹಾಲಿನ ಪುಡಿ ಸಿಕ್ಕಿಲ್ಲ…!
ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲು ಅಕ್ಕಿ, ಬೆಳೆ ವಿತರಣೆ
ಮಂಜುನಾಥ ಎಸ್. ರಾಠೋಡ
ಗದಗ prajakiran.com : ಕರೋನಾ ವೈರಸ್ ಕೋವಿಡ್–೧೯ ವೈರಸ್ ಸೋಂಕು ತಡೆಗಟ್ಟಲು ಹಾಗೂ ನಿಯಂತ್ರಿಸಲು ಸರ್ಕಾರಿ ಶಾಲೆಗಳು ಬಂದ್ ಆಗಿದ್ದರೂ ಮಕ್ಕಳ ಕಲಿಕೆಗೆ ತೊಂದರೆ ಆಗದಿರಲೆಂದು ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ.
ಆದರೆ, ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ದೊರೆಯುವ ಆಹಾರ ಪದಾರ್ಥಗಳಲ್ಲಿ ಅಕ್ಕಿ–ಬೆಳೆ ಮಾತ್ರವೇ ನೀಡಲಾಗಿದೆ.
ಜಿಲ್ಲೆಯ ಕಿರಿಯ ಪ್ರಾಥಮಿಕ–೨೮೨, ಹಿರಿಯ ಪ್ರಾಥಮಿಕ ೬೪೧, ಪ್ರೌಢಶಾಲೆ ೩೨೩ ಸೇರಿ ಒಟ್ಟು ೧೨೪೬ ಶಾಲೆಗಳಲ್ಲಿ ೩ ಲಕ್ಷ ಮಕ್ಕಳು ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಅವರಿಗೆ ಶಾಲೆಗಳ ಮುಖ್ಯಶಿಕ್ಷಕರ ಮೂಲಕ ರಜಾ ಅವಧಿಯ ಅಕ್ಕಿ ವಿತರಿಸುವ ಪ್ರಕ್ರಿಯೆ ನಡೆದಿದೆ. ೧ರಿಂದ ೫ನೇ ತರಗತಿಯವರಿಗೆ ಪ್ರತಿ ವಿದ್ಯಾರ್ಥಿಗೆ ೧೦೦ ಗ್ರಾಂ.ನಂತೆ ೩.ಕೆ.ಜಿ. ೭೦೦ ಗ್ರಾಂ. ಅಕ್ಕಿ, ೩ ಕೆಜಿ ೨೫೦ ಗ್ರಾಂ. ತೊಗರಿ ಬೆಳೆ ಮತ್ತು ೬ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ೧೫೦ ಗ್ರಾಂ.ನಂತೆ ೫ ಕೆ.ಜಿ. ೫೦೦ ಗ್ರಾಂ. ಅಕ್ಕಿ, ೩ ಕೆಜಿ ೫೦೦ ಗ್ರಾಂ ತೊಗರಿ ಬೆಳೆ ವಿತರಿಸಲಾಗುತ್ತಿದೆ.
ಅಡುಗೆ ಎಣ್ಣೆ, “ಕ್ಷೀರಭಾಗ್ಯ” ಯೋಜನೆಯಲ್ಲಿ ಹಾಲಿನ ಪುಡಿಯನ್ನು ಕೊಡಲಾಗಿಲ್ಲ. ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ೧ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಅವಧಿಯ ಅಂದರೆ ಏ.೪ರಿಂದ ಮೇ ೨೮ರವರೆಗೆ ೩೭ ದಿನಗಳಿಗೆ (ಸಾರ್ವತ್ರಿಕ ರಜಾ ದಿನ ಹೊರತುಪಡಿಸಿ) ಬಿಸಿಯೂಟದ ಬದಲಿಗೆ ಆಹಾರ ಧಾನ್ಯ ವಿತರಿಸುವಂತೆ ಸರ್ಕಾರದಿಂದ ಆದೇಶಿಸಲಾಗಿದೆ.
ಕೆಎಫ್ಸಿ ಗೋದಾಮುಗಳಿಗೆ ಹಾಗೂ ಶಾಲೆಗಳಿಗೆ ಸರಬರಾಜಾಗಿ ಬಳಕೆಯಾಗದೆ ಉಳಿದಿರುವ ಅಡುಗೆ ಎಣ್ಣೆ ಹಾಗೂ ಹಾಲಿನ ಪುಡಿಯನ್ನು ನೀಡುವಂತೆ ತಿಳಿಸಲಾಗಿದೆ. ಹೀಗಿದ್ದರೂ, ಎಣ್ಣೆ, ಹಾಲಿನ ಪುಡಿ ವಿತರಿಸಿಲ್ಲ.
ಕೊರೊನಾ ಬಿಸಿ:
ರಾಜ್ಯದಲ್ಲಿ ೧.೧೦ ಲಕ್ಷ ಮಂದಿ ಬಿಸಿಯೂಟ ಅಡುಗೆಯವರಿದ್ದಾರೆ. ಗದಗ ಜಿಲ್ಲೆಯಲ್ಲಿ ಇವರ ಸಂಖ್ಯೆ ೩೫೦೦ಇದೆ. ಕಳೆದ ೬ ತಿಂಗಳಿಂದ ಗೌರವ ಧನವೂ ಇಲ್ಲ, ಕನಿಷ್ಠ ಅಕ್ಕಿ, ಬೇಳೆಯೂ ಇಲ್ಲ.
ಕೊರೊನಾ ಮಹಾಮಾರಿ ಬಂದಾಗಿನಿಂದ ಬಿಸಿಯೂಟ ಅಡುಗೆ ತಯಾರಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸಾಮಾನ್ಯವಾಗಿ ಶಾಲೆಯಲ್ಲಿ ಬಿಸಿಯೂಟ ತಯಾರು ಮಾಡುವವರು ಬಡವರು. ಆಸಕ್ತರು, ವಿಶೇಷಚೇತನರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಇವರಿಗೆ ಮಾಸಿಕ ೫೦೦ ರೂ. ನಿಂದ ಪ್ರಾರಂಭವಾದ ಗೌರವ ಧನ, ಅನೇಕ ಹೋರಾಟಗಳ ಫಲವಾಗಿ ಈಗ ೨,೬೦೦ ರೂ. ತಲುಪಿದೆ. ಆದರೆ, ಕಳೆದ ೬ ತಿಂಗಳಿಂದ ಯಾವೊಬ್ಬ ಅಡುಗೆ ಸಹಾಯಕರಿಗೂ ಗೌರವಧನ ಬಂದಿಲ್ಲ.
ಶಾಲಾ ಮಕ್ಕಳಿಗೆ ಅಕ್ಕಿ, ಬೇಳೆ ಮತ್ತಿತರೆ ಪಡಿತರವನ್ನು ಶಿಕ್ಷಕರು ಮನೆಗೆ ತಲುಪಿಸುತ್ತಿದ್ದಾರೆ. ಅಡುಗೆಯವರು ಬದುಕಿದ್ದಾರೋ, ಇಲ್ಲವೋ ಎಂದು ಈವರೆಗೆ ಶಿಕ್ಷಕರಾಗಲಿ, ಇಲಾಖೆ ಅಧಿಕಾರಿಗಳಾಗಲಿ, ಜಿಲ್ಲಾಡಳಿತವಾಗಲಿ ಗಮನ ಹರಿಸಿಲ್ಲ.
ಗೌರವಧನ ಬಿಡುಗಡೆಗೆ ಒತ್ತಾಯಿಸಿ ಹತ್ತಾರು ಬಾರಿ ಸಚಿವರಿಂದ ಹಿಡಿದು ಜಿಲ್ಲಾಧಿಕಾರಿವರೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ.
ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಪದಾರ್ಥಗಳ ಸೋರಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಫಲಾನುಭವಿಗಳಿಗೆ ನೇರವಾಗಿ ಕಿಟ್ ರೂಪದಲ್ಲಿ (ಮಾಸ್ಟರ್ ಬ್ಯಾಗ್) ಆಹಾರ ಪದಾರ್ಥ ತಲುಪಿಸಲು ಯೋಜನೆ ರೂಪಿಸಿದೆ.
ನಿಗದಿತ ಎಲ್ಲ ಆಹಾರ ಪದಾರ್ಥಗಳನ್ನು ಎಂಎಸ್ಪಿಗಳಲ್ಲೇ ಚೀಲಕ್ಕೆ ತುಂಬಿಸಿ ಕಿಟ್ ಮಾಡಿ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ.
ನಂತರ ಅಂಗನವಾಡಿಗಳಿಂದ ಫಲಾನುಭವಿಗಳ ಮನೆ ಬಾಗಿಲಿಗೆ ಆಹಾರ ಪದಾರ್ಥಗಳ ಕಿಟ್ ತಲುಪಲಿದೆ. ಒಮ್ಮೆ ಪ್ಯಾಕಿಂಗ್ ಆದ ಕಿಟ್ಗಳನ್ನು ಅಂಗನವಾಡಿಗಳಲ್ಲಿ ತೆರೆಯಲು ಅವಕಾಶವಿಲ್ಲ.
ಪೌಷ್ಟಿಕ ಆಹಾರ ಪದಾರ್ಥಗಳ ಕಿಟ್ ಹಾಲಿನ ಪುಡಿ, ಸಕ್ಕರೆ, ಬಹುಧಾನ್ಯ ಮಿಶ್ರಿತ ಗೋಧಿ ಪುಡಿ, ಹೆಸರು ಬೇಳೆ, ಮೊಟ್ಟೆ, ಕಡಲೆ ಬೀಜ, ಬೆಲ್ಲ, ಹೆಸರು ಕಾಳು, ಉಪ್ಪು, ಅಕ್ಕಿ, ತೊಗರಿ ಬೇಳೆ, ತರಕಾರಿ, ಸಾಂಬರು ಪುಡಿ, ಸಾಸಿವೆ, ತಾಳೆ ಎಣ್ಣೆ, ಗೋಧಿಯನ್ನು ಒಳಗೊಂಡಿರುತ್ತದೆ. ಫಲಾನುಭವಿಗಳ ವಯಸ್ಸಿನ ಆಧಾರದಲ್ಲಿ ನಿಗದಿಪಡಿಸಿದಂತೆ ಈ ಆಹಾರ ಪದಾರ್ಥಗಳನ್ನು ಕಿಟ್ನಲ್ಲಿ ತುಂಬಿಸಿ ರವಾನಿಸಲಾಗುತ್ತದೆ.
“ಕೋವಿಡ್ ಲಾಕ್ಡೌನ್ ಸೃಷ್ಟಿಸಿದ ತಲ್ಲಣದಿಂದಾಗಿ ಗ್ರಾಮೀಣ ಭಾಗದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈ ವೇಳೆಯಲ್ಲಿ ಶಾಲಾ ಮಕ್ಕಳಿಗೆ ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಿದ್ದರೆ ಅನುಕೂಲ ಆಗುತ್ತಿತ್ತು. ಕೇವಲ ಅಕ್ಕಿ ಮತ್ತು ಬೆಳೆ ಮಾತ್ರ ವಿತರಿಸಲಾಗುತ್ತಿದೆ.” ಮುತ್ತಣ್ಣ ಬಾರಡ್ಡಿ, ಎಸ್ಡಿಎಂಸಿ ಅಧ್ಯಕ್ಷ, ಗದಗ.