ಧಾರವಾಡ ಪ್ರಜಾಕಿರಣ.ಕಾಮ್ ಮಾ. 2: ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ತುಷಾರ ಪವಾರ ಎಂಬುವವರು ಮುಂಬೈನ ಅಂಜನ್ ಅಟೋಮೆಟಿವ್ ಡೀಲ್ರಿಂದ ಕವಾಸಾಕಿ ಕಂಪನಿಯ ಕವಾಸಾಕಿ-900 ಸುಪರ್ ಬೈಕನ್ನು ದಿ:13/05/2021 ರಂದು ರೂ.14,99,000/- ಹಣವನ್ನು ನೀಡಿ ಖರೀದಿಸಿದ್ದರು.
ಆ ಬೈಕಿಗೆ ರೂ.39,006/- ಪ್ರೀಮಿಯಮ್ ಕಟ್ಟಿ ನ್ಯೂ ಇಂಡಿಯಾ ಅಸುರೆನ್ಸ್ ಕಂಪನಿಯಿಂದ ವಿಮೆ ಮಾಡಿಸಿದ್ದರು.
ಆ ವಾಹನಕ್ಕೆ ಮುಂಬೈನ ಪಶ್ಚಿಮ ಆರ್.ಟಿ.ಓ ಕಚೇರಿಯಿಂದ ಟೆಂಪರವರಿ ರೆಜಿಸ್ಟ್ರೇಷನ್ ಸಹ ಆಗಿತ್ತು.
ಒಂದು ತಿಂಗಳ ಒಳಗಾಗಿ ಆ ಬೈಕಿಗೆ ಖಾಯಂ ರೆಜಿಸ್ಟ್ರೇಷನ್ ಮಾಡಿಸಬೇಕಾಗಿತ್ತು. ಆದರೆ ಅದೇ ಸಮಯಕ್ಕೆ ಕೋವಿಡ್-19 ಬಂದು ಪೂರ್ತಿ ಲಾಕ್ಡೌನ್ ಆದುದರಿಂದ ಆರ್.ಟಿ. ಓ. ಮತ್ತು ಇತರೇ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದ್ದರಿಂದ ದೂರುದಾರ ತನ್ನ ಬೈಕಿಗೆ ಖಾಯಂ ನೋಂದಣಿ ಮಾಡಿಸಿರಲಿಲ್ಲ.
ಈ ಮಧ್ಯದಲ್ಲಿ ದಿ:27/08/2021 ರಂದು ಆ ಬೈಕಿಗೆ ಆಕಸ್ಮಿಕ ಬೆಂಕಿ ತಗಲಿ ಅದು ಸುಟ್ಟು ಹೋಯಿತು.
ಬೈಕಿನ ಮೇಲೆ ವಿಮೆ ಚಾಲ್ತಿಯಿದ್ದುದರಿಂದ ಅದರ ಮೌಲ್ಯ 14,99,000/- ತನಗೆ ನೀಡುವಂತೆ ದೂರುದಾರ ಇನಸುರೆನ್ಸ್ ಕಂಪನಿಗೆ ಕ್ಲೇಮ ಅರ್ಜಿ ಹಾಕಿದ್ದರು.
ಘಟನೆ ದಿನ ದಿ:27/08/2021ರಂದು ಆಗಿತ್ತು. ಆ ದಿನ ಸದರಿ ವಾಹನಕ್ಕೆ ಖಾಯಂ ನೋಂದಣಿ ಆಗಿರಲಿಲ್ಲ ಅನ್ನುವ ಕಾರಣ ನೀಡಿ ಅವರ ಕ್ಲೇಮನ್ನು ವಿಮಾ ಕಂಪನಿಯವರು ತಿರಸ್ಕರಿಸಿದ್ದರು.
ಕೋವಿಡ್ ಅವಧಿಯಲ್ಲಿ ವಾಹನ ನೋಂದಣಿ ಮುಂದೂಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದೇಶಗಳಿದ್ದರೂ ಅವುಗಳನ್ನು ಪರಿಗಣಿಸದೆ ತನ್ನ ಕ್ಲೇಮನ್ನು ವಿಮಾ ಕಂಪನಿಯವರು ತಿರಸ್ಕರಿಸಿರುವುದು ಕಾನೂನು ವಿರೋಧಿಕ್ರಮ ಹಾಗೂ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ವಿಮಾ ಕಂಪನಿಯವರ ವಿರುದ್ಧ ಕ್ರಮ ಜರುಗಿಸಿ ತನಗೆ ಪರಿಹಾರ ನೀಡುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ಬೈಕಿಗೆ ಘಟನಾ ದಿನದಂದು ಖಾಯಂ ನೋಂದಣಿ ಆಗಿರಲಿಲ್ಲವಾದ್ದರಿಂದ ಅದು ವಿಮಾ ಪಾಲಸಿಯ ಷರತ್ತನ್ನು ಉಲ್ಲಂಘಿಸಿದಂತಾಗುತ್ತದೆ ಅನ್ನುವ ಕಾರಣದ ಮೇಲೆ ದೂರುದಾರರ ಕ್ಲೇಮನ್ನು ವಜಾ ಮಾಡಿರುವುದಾಗಿ ಹೇಳಿ ವಿಮಾ ಕಂಪನಿಯವರು ಆಕ್ಷೇಪಣೆ ಎತ್ತಿದ್ದರು.
ಅವರ ದೂರು ಮತ್ತು ಆಕ್ಷೇಪಣೆಯನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಘಟನೆ ನಡೆದ ದಿನಾಂಕ 27/08/2021ರಂದು ರಾಜ್ಯ ಹಾಗೂ ದೇಶ್ಯಾದಂತ್ಯ ಕೋವಿಡ್-19 ಕಾಯಿಲೆ ಇದ್ದು ಅದರ ನಿಮಿತ್ತ ದೇಶ್ಯಾದಂತ್ಯ ಲಾಕಡೌನ್ ಆಗಿದೆ.
ಲಾಕ್ಡೌನ್ ಅವಧಿಯಲ್ಲಿ ಆರ್.ಟಿ.ಓ ಕಚರಿಗೆ ಬಂದು ವಾಹನ ನೋಂದಣಿ ಮಾಡಿಸುವುದು ಅಸಾಧ್ಯ ಇದ್ದುದರಿಂದ ಮಾರ್ಚ್-2020 ರಿಂದ ಅಕ್ಟೋಬರ್-2021ರ ವರೆಗೆ ವಾಹನಗಳ ನೋಂದಣಿ ಪ್ರಕ್ರಿಯೇಯನ್ನು ವಿಸ್ತರಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಆದೇಶ ಹೊರಡಿಸಿವೆ.
ಇದೇ ಅವಧಿಯಲ್ಲಿ ದೂರುದಾರರ ಬೈಕ್ ಸುಟ್ಟು ಅವರಿಗೆ ನಷ್ಟ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಸರ್ಕಾರದ ಆದೇಶಗಳನ್ವಯ ಘಟನಾ ದಿನದಂದು ಆ ಬೈಕಿಗೆ ವಾಹನ ನೋಂದಣೀ ಇತ್ತು ಅಂತಾ ಪರಿಗಣಿಸಿ ಆ ಬೈಕಿನ ಪೂರ್ತಿ ಮೌಲ್ಯ ರೂ.14,99,000/- ಹಣವನ್ನು ದೂರುದಾರರಿಗೆ ಪರಿಹಾರವಾಗಿ ನೀಡದೇ ವಿಮಾ ಕಂಪನಿಯವರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆಎಸಗಿದ್ದಾರೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಆ ಬೈಕಿನ ಪೂರ್ತಿ ಮೌಲ್ಯ ರೂ.14,99,000/-ಗಳ ಪರಿಹಾರ ಮತ್ತು ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.50,000/- ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ರೂ.10,000/- ಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಜಿಲ್ಲಾಗ್ರಾಹಕರಆಯೋಗ ಎದುರುದಾರರ ವಿಮಾ ಕಂಪನಿಗೆ ಆದೇಶಿಸಿದೆ.