ಬೆಂಗಳೂರು prajakiran.com : ರಾಜ್ಯಾದ್ಯಂತ ಕೆಲವು ಜಿಲ್ಲೆಗಳಲ್ಲಿ ಜು. 31ರಂದು ಮತ್ತು ಇನ್ನೂಳಿದ ಎಲ್ಲಾ ಜಿಲ್ಲೆಗಳಲ್ಲಿ ಆಗಸ್ಟ 1ರಂದು ನಡೆಯುವಂತಹ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾಗಳಲ್ಲಿ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ.
ಬಕ್ರೀದ್ ದಿನ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಲು ಇಚ್ಛಿಸುವಂತಹ ಮಸೀದಿಗಳ ಆಡಳಿತ ಸಮಿತಿಗಳು ಜೂನ್ 6ರಂದು ಆದೇಶದನ್ವಯ ಎಲ್ಲಾ ಮುನ್ನಚ್ಚರಿಕೆ ಕ್ರಮಗಳನ್ನು ಕೈ ಗೊಂಡು ಆಯಾ ಮಸೀದಿಗಳಲ್ಲಿ ಗರಿಷ್ಠ 50 ಜನರು ಮೀರದಂತೆ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಬಹುದು.
ಒಂದು ವೇಳೆ ಅಧಿಕ ಜನರು ಆಗಮಿಸಿದಲ್ಲಿ ಎರಡು ಅಥವಾ ಮೂರು ಬ್ಯಾಚ್ ಗಳಲ್ಲಿ ಆಯಾ ಮಸೀದಿಗಳಲ್ಲಿ ನಮಾಜ್ ನಿರ್ವಹಿಸಲು ನಿರ್ದೇಶನ ನೀಡಲಾಗಿದೆ.
ಯಾವುದೇ ಮಸೀದಿಯ ಆಡಳಿತ ಮಂಡಳಿಯು ಕೋವಿಡ್ ಮುನ್ನಚ್ಚರಿಕೆ ಕ್ರಮವಾಗಿ ಶುಕ್ರವಾರದ ಜುಮಾ ಪ್ರಾರ್ಥನೆ ಸಹಿತ ದಿನದ ಐದು ಹೊತ್ತಿನ ಸಾಮೂಹಿಕ ಪ್ರಾರ್ಥನೆಯನ್ನು ಈಗಾಗಲೇ ನಿರ್ಬಂಧಿಸಿದ್ದಲ್ಲಿ ಅಂತಹ ಮಸೀದಿ ಆಡಳಿತ ಸಮಿತಿಗಳು ಸದರಿ ನಿರ್ಧಾರವನ್ನ ಬಕ್ರೀದ್ ನಮಾಜ್ ನಲ್ಲಿ ಸಹ ಮುಂದುವರೆಸುವುದು.
ಮಸೀದಿಗಳನ್ನು ಹೊರತು ಪಡಿಸಿ ಇತರೆ ಯಾವುದೇ ಸ್ಥಳಗಳಲ್ಲಿ ಅಂದರೆ ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ಮತ್ತಿತರ ತೆರೆದ ಜಾಗಗಳಲ್ಲಿ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜಿಸುವಂತಿಲ್ಲ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಜಿಲ್ಲಾ ವಕ್ಫ್ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಂಬಂಧಪಟ್ಟ ಎಲ್ಲಾ ಈದ್ಗಾ, ಮಸೀದಿ, ದರ್ಗಾ ಹಾಗೂ ಮತ್ತಿತರ ವಕ್ಫ್ ಸಂಸ್ಥೆಗಳಿಗೆ ಈ ಆದೇಶವನ್ನು ಜಾರಿ ಮಾಡಬೇಕು.
ಈ ಆದೇಶವನ್ನು ಎಲ್ಲಾ ವಕ್ಫ್ ಸಂಸ್ಥೆಗಳು ಕಟ್ಟುನಿಟ್ಟಾಗಿ ಪರಿಪಾಲಿಸಲು ಕ್ರಮ ಜರುಗಿಸಬೇಕು ಎಂದುಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ಸರಕಾರದ ಕಾರ್ಯದರ್ಶಿ ಎ.ಬಿ ಇಬ್ರಾಹಿಂ ಆದೇಶ ಹೊರಡಿಸಿದ್ದಾರೆ.