ಧಾರವಾಡ prajakiran.com : ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸ್ವಂತ ಚಿಕ್ಕಮ್ಮನ ಮೇಲೆ ಆಕೆಯ ಬಿಜೆಪಿ ಮುಖಂಡರು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾಧುಶ್ರಿ ಗೌಡರ ಎಂಬ ಮಹಿಳೆಯೇ ಹಲ್ಲೆಗೊಳಗಾಗಿದ್ದಾರೆ. ಸದ್ಯಅವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನಗೆ ನ್ಯಾಯ ಕೊಡಿಸುವಂತೆ ಅಂಗಲಾಚಿದ್ದಾರೆ.
ಆಕೆಯ ಮೇಲೆ ಅಕ್ಕ, ತಂಗಿ, ಅಕ್ಕನ ಮಕ್ಕಳೇ ಜಂಬೆ, ಮಚ್ಚು, ಲಾಂಗ್ ಹಾಗೂ ಕೊಡ್ಲಿ ಸೇರಿದಂತೆ ವಿವಿಧ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಮಾಧುಶ್ರೀ ಆರೋಪಿಸಿದ್ದಾರೆ.
ಬಿಜೆಪಿ ಮುಖಂಡರಾದ ಶಂಕರಪ್ಪ ಕೋಮಾರ ದೇಸಾಯಿ, ವಿರೇಂದ್ರ ಸಂಗೋಳ್ಳಿ, ರುದ್ರಪ್ಪ ಕೋಮಾರ ದೇಸಾಯಿ, ಅರುಣ ಕೋಮಾರ ದೇಸಾಯಿ, ಆನಂದ, ಮೂಗಪ್ಪ ದೊಡವಾಡ, ಪ್ರೇಮಾ ಕೊಮಾರದೇಸಾಯಿ, ರಾಜಶ್ರೀ ಅಳಗವಾಡಿ, ಗಿರಿಜಾ ಸಂಗೊಳ್ಳಿ, ಸುಮಿತಾ ಸೇರಿದಂತೆ ಹತ್ತಕ್ಕೂ ಹೆಚ್ಚು ಜನ ನೈಟಿ ಹರಿದು, ನನ್ನನ್ನೂ ಎಳೇದಾಡಿ, ಕೈ ಕಾಲು ಮುರಿಯುವಂತೆ ಥಳಿಸಿದ್ದಾರೆ. ಅಲ್ಲದೆ,ಅತ್ಯಾಚಾರಕ್ಕೆ ಯತ್ನಿಸಿ ಮಾನಭಂಗ ಮಾಡಿದ್ದಾರೆ.
ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮಗ ಅಕ್ಷಯನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಧುಶ್ರೀ ಹೇಳಿದ್ದಾರೆ.
ಆದರೆ, ಬಿಜೆಪಿ ಮುಖಂಡ ಶಂಕರ ಕೋಮಾರ ದೇಸಾಯಿ ಈ ಕುರಿತು ಪ್ರಜಾಕಿರಣಕ್ಕೆ ಪ್ರತಿಕ್ರಿಯಿಸಿದ್ದು, ನಾವು ಕೂಡಅವರವಿರುದ್ದ ಪ್ರತಿ ದೂರು ದಾಖಲಿಸಿದ್ದೇವೆ. ಅವರು ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಚಿಕ್ಕಮ್ಮನ ಮಗ ನನ್ನ ತಮ್ಮನಿಗೆ ಚಾಕುನಿಂದ ಇರಿದಿದ್ದು, ಆತನಿಗೆ ಹದಿನಾಲ್ಕು ಸ್ಟಿಚ್ ಬಿದ್ದಿವೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.