ಧಾರವಾಡ ಪ್ರಜಾಕಿರಣ.ಕಾಮ್ ಜು.27 : ಹುಬ್ಬಳ್ಳಿಯ ಉಣಕಲ್ನ ಅಂಬಿಕಾ ನಗರ ವಾಸಿ ಸವಿತಾ, ಶೈಲೇಂದ್ರ ದಂಪತಿಗಳು ಸ್ವಯಂ ಉದ್ಯೋಗಕ್ಕೆಂದು, ಹುಬ್ಬಳ್ಳಿಯ ರಾಜೇಂದ್ರ ನಗರದ ಶ್ರೀ ಸಾಯಿ ಸರ್ಚ್ & ಸಪೋರ್ಟ್ ಕಂಪನಿಯವರಿಂದ ರೂ.1 ಲಕ್ಷ 51 ಸಾವಿರ 750 ರೂ ಹಣ ಕೊಟ್ಟು 6ಜಿ ಅಟೋಮೆಟಿಕ್ ಅಗರಬತ್ತಿ ತಯಾರಿಸುವ ಮಶೀನನ್ನು ಖರೀದಿಸಿದ್ದರು.
ಮಶೀನ್ ಪಡೆದುಕೊಳ್ಳುವ ಪೂರ್ವದಲ್ಲಿ ದೂರುದಾರರು ತಯಾರಿಸಿದ ಅಗರಬತ್ತಿಗಳನ್ನು ತಾವೇ ಹಣ ಕೊಟ್ಟು ಪಡೆದುಕೊಳ್ಳುವುದಾಗಿ ಎದುರುದಾರರು ಒಪ್ಪಿಕೊಂಡಿದ್ದರು.
ಖರೀದಿಸಿದ ಕೆಲವೇ ತಿಂಗಳಲ್ಲಿ ಸದರಿ ಮಶೀನಿನಲ್ಲಿ ದೋಷ ಉಂಟಾಗಿತ್ತು. ಅಲ್ಲದೆ ದೂರುದಾರರು ತಯಾರಿಸಿದ ಅಗರಬತ್ತಿಗಳ ಹಣವನ್ನು ಎದುರುದಾರ ಕಂಪನಿಯವರು ಸಕಾಲಕ್ಕೆ ಕೊಡದೇ ಸತಾಯಿಸುತ್ತಿದ್ದರು.
ದೂರುದಾರರು ಮಶೀನ ದುರಸ್ತಿ ಮಾಡಿಕೊಳ್ಳಲು ಹಲವು ಬಾರಿ ವಿನಂತಿಸಿದರೂ ಎದುರುದಾರರು ಅವರ ಕೋರಿಕೆಗೆ ಸ್ಪಂದಿಸಿರಲಿಲ್ಲ.
ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರುದಾರ ಫಿರ್ಯಾದಿ ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ. ಹಿರೇಮಠ ಅವರು ಸದರಿ ಅಗರಬತ್ತಿ ತಯಾರಿಸುವ ಮಶೀನ್ ಖರೀದಿಸಿದ ಒಂದು ವರ್ಷದ ಒಳಗಡೆಯೇ ಅದರಲ್ಲಿ ದೋಷ ಕಂಡುಬಂದಿದ್ದರಿಂದ ಮತ್ತು ಆ ಬಗ್ಗೆ ದೂರಿದರೂ ಎದುರುದಾರ ಕಂಪನಿಯವರು ಅದರ ದೋಷ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳದೇ ಸೇವಾ ನ್ಯೂನ್ಯತೆ ಎಸಗಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಅಲ್ಲದೇ ದೂರುದಾರರು ಮಾರಾಟ ಮಾಡಿದ ಅಗರಬತ್ತಿಗಳ ಬಾಕಿ ಹಣ ರೂ.12,495/-ಗಳನ್ನು ಕೊಡಬೇಕಾಗುತ್ತದೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.
ಸ್ವಯಂ ಉದ್ಯೋಗಕ್ಕೆಂದು ಆ 6ಜಿ ಅಟೋಮೆಟಿಕ್ ಅಗರಬತ್ತಿ ಮಶೀನು ಖರೀದಿಸಿದ್ದರು.
ಅದರಲ್ಲಿ ದೋಷ ಕಂಡುಬಂದಿದ್ದರಿಂದ ದೂರುದಾರರು/ಗ್ರಾಹಕರಿಗೆ ತೊಂದರೆ ಮತ್ತು ಅನಾನುಕೂಲ ಆಗಿದೆ ಅಂತಾ ಆಯೋಗ ಅಭಿಪ್ರಾಯಪಟ್ಟಿದೆ.
ಕಾರಣ ಎದುರುದಾರ ಕಂಪನಿಯವರು ಅಗರಬತ್ತಿ ಮಶೀನಿನ ಮೌಲ್ಯ ರೂ.1,51,750/- ಮತ್ತು ಅಗರಬತ್ತಿ ಮಾರಿದ ಹಣ ರೂ.12,495/- ಸೇರಿ ಒಟ್ಟು ರೂ.1,64,245/-ಮತ್ತು ಅದರ ಮೇಲೆ ಶೇ.8 ರಂತೆ ದಿ:01/06/2021 ರಿಂದ ಬಡ್ಡಿ ಲೆಕ್ಕ ಹಾಕಿ ಹಣ ಸಂದಾಯವಾಗುವವರೆಗೆ ಕೊಡುವಂತೆ ಎದುರುದಾರ ಕಂಪನಿಗೆ ಆಯೋಗ ಆದೇಶಿಸಿದೆ.
ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ರೂ.25,000/-ಗಳ ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಎದುರುದಾರರಿಗೆ ಆಯೋಗ ನಿರ್ದೇಶಿಸಿದೆ.