ಬೆಂಗಳೂರು prajakiran.com : ನಾಡಿನ ಹಿರಿಯ ಸಾಹಿತಿ ಚಂಪಾ @ ಚಂದ್ರಶೇಖರ ಪಾಟೀಲ ಸೋಮವಾರ ವಿಧಿವಶರಾದರು.
ಚಂಪಾ ಅವರಿಗೆ 83 ವರ್ಷ ವಯಸ್ಸಾಗಿತ್ತು.
ಅವರು ಭಾನುವಾರ ಉಸಿರಾಟದ ಸಮಸ್ಯೆಯಾಗಿ ಸಮೀಪದ “ಅಸ್ತ್ರ”ಆಸ್ಪತ್ರೆಗೆ ದಾಖಲಾಗಿದ್ದರು.
ಇಂದು ಸೋಮವಾರ ಬೆಳಗಿನ ಜಾವ 6 ಗಂಟೆಗೆ ಕೊನೆಯುಸಿರೆಳೆದರು.
ಅವರು ಪತ್ನಿ ನೀಲಾ,
ಪುತ್ರ ಸುನೀಲ ,ಪುತ್ರಿ ಮೀನಾ, ಸೇರಿದಂತೆ ಅಪಾರ ಬಂಧು ಬಳಗ, ಅಭಿಮಾನಿಗಳು, ಶಿಷ್ಯರು ಹೊಂದಿದ್ದರು.
ಇಂದು ಸಂಜೆ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಅವರು ತಮ್ಮ ಬಂಡಾಯ ಸಾಹಿತ್ಯದ ಮೂಲಕ ಬಂಡಾಯ ಚಳುವಳಿಯ ನಾಎಇನ ಗಮನ ಸೆಳೆದಿದ್ದರು.
ಚಂಪಾ ಅವರು ಮೂಲತಃ ಹಾವೇರಿ ಜಿಲ್ಲೆಯ ಹತ್ತಿಮತ್ತೂರು ಗ್ರಾಮದವರಾದರೂ ಕರ್ಮಭೂಮಿ ಧಾರವಾಡ ಆಗಿತ್ತು.
1964 ರಲ್ಲಿ ತಮ್ಮ ಇಬ್ಬರು ಗೆಳೆಯರಾದ ಸಿದ್ದಲಿಂಗ ಪಟ್ಟಣಶೆಟ್ಟಿ ಮತ್ತು ಗಿರಡ್ಡಿ ಗೋವಿಂದರಾಜ್ ಅವರೊಂದಿಗೆ ಪ್ರಾರಂಭವಾದ ಸಂಕ್ರಮಣ ಪ್ರಭಾವಿ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿದ್ದರು.
ಗೋಕಾಕ್ ಚಳುವಳಿ, ಬಂಡಾಯ ಚಳುವಳಿ, ತುರ್ತುಪರಿಸ್ಥಿತಿಯ, ಆಂದೋಲನದಂತಹ ಅನೇಕ ಸಾಮಾಜಿಕ ಮತ್ತು ಸಾಹಿತ್ಯಿಕ ಚಳವಳಿಗಳನ್ನು ಮುನ್ನಡೆಸಿದ್ದರು.
ಮಂಡಲ್ ವರದಿಯ ಅನುಷ್ಠಾನ, ರೈತ ಚಳುವಳಿ ಇತ್ಯಾದಿಗಳಲ್ಲಿ ಭಾಗಿಯಾಗಿದ್ದರು.
ಅವರು ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾದ ನಂತರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಾಕಷ್ಟು ಪ್ರಮಾಣದಲ್ಲಿ ಸಾಹಿತ್ಯ ಸೇವೆ ಸಲ್ಲಿಸಿದರು.
ತಮ್ಮ ಸ್ನೇಹಿತ ಮತ್ತು ವಚನ ವಿದ್ವಾಂಸ ಎಂ. ಎಂ. ಕಲಬುರ್ಗಿಯವರ ಹತ್ಯೆಯನ್ನು ಪ್ರತಿಭಟಿಸಿ, ಅವರು ಇತ್ತೀಚೆಗೆ ಕರ್ನಾಟಕ ಸರ್ಕಾರದ ಅತ್ಯುನ್ನತ ಸಾಹಿತ್ಯ ಗೌರವವಾದ ಪಂಪ ಪ್ರಶಸ್ತಿಯನ್ನು ಹಿಂದಿರುಗಿಸಿ ಸರಕಾರದ ಗಮನ ಸೆಳೆದಿದ್ದರು.