ಬೆಳಗಾವಿ prajakiran.com : ಬೆಳಗಾವಿ ಜಿಲ್ಲೆಯ ಗೋಕಾಕ್ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಅವರು ತಮ್ಮ ಆಪ್ತರ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಮುಂಬೈಯಿಂದ ನೇರವಾಗಿ ಬೆಂಗಳೂರಿಗೆ ಬಂದು ರಾಜಿನಾಮೆ ನೀಡಲಿದ್ದಾರೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.
ಇದಕ್ಕೆ ಮುಖ್ಯ ಕಾರಣ 20 ಸಾವಿರ ಕೋಟಿ ನೀರಾವರಿ ಯೋಜನೆ ಕುರಿತು ಪರಿಷತ್ ಸದಸ್ಯ ಎಚ್.ವಿಶ್ವನಾಥ ಮಾಡಿರುವ ಅಪಾದನೆ ಕುರಿತು ಅಸಮಾಧಾನವಿದೆ ಎನ್ನಲಾಗಿದೆ.
ಜೊತೆಗೆ ಬಹುಮುಖ್ಯವಾಗಿ
ಸಿಡಿ ಪ್ರಕರಣ ನಡೆದು 5 ತಿಂಗಳಾದರೂ ತಮ್ಮನ್ನು ಅದರಿಂದ ಪಾರು ಮಾಡಲು ಬಿಜೆಪಿ ನಾಯಕರು ಆಸಕ್ತಿ ತೋರಿಸುತ್ತಿಲ್ಲ.
ಜೊತೆಗೆ ಅನಗತ್ಯವಾಗಿ ಈ ಪ್ರಕರಣವನ್ನು ಎಳೆದು ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂಬುದು ರಮೇಶ ಜಾರಕಿಹೊಳಿಯವರ ಮನದಾಳದ ನೋವು ಎಂದು ಹೇಳಲಾಗುತ್ತಿದೆ.
ಸರಕಾರವು ನಮ್ಮದೆ, ನಾವೇ ತಂದ ಸರಕಾರ ನಮಗೆ ರಕ್ಷಣೆ ನೀಡುತ್ತಿಲ್ಲ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಶೀಘ್ರವೇ ಪ್ರಕರಣದಿಂದ ಮುಕ್ತಿ ನೀಡಿ ಮತ್ತೆ ಮಂತ್ರಿ ಮಾಡುವ ಆಶ್ವಾಸನೆ ನೀಡಲಾಗಿತ್ತು.
ಆದರೆ ಈಗ ಬಿ ರಿಪೋರ್ಟ್ ಹಾಕಿಸಿ ಮಂತ್ರಿ ಮಾಡಲು ಮನಸ್ಸು ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಶಾಸಕ ರಮೇಶ ಜಾರಕಿಹೊಳಿ ಅವರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆಯಾ ಅಥವಾ ಅವರು ಶಾಸಕಸ್ಥಾನಕ್ಕೆ ರಾಜಿನಾಮೆ ನೀಡುವ ಹಂತಕ್ಕೆ ತಲುಪುತ್ತಾರೆಯೋ ಎಂಬುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕಿದೆ.