ಬೆಂಗಳೂರು prajakiran.com : ಅತ್ಯಾಚಾರ ಆರೋಪಿಯನ್ನು ಭೇಟಿ ಮಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು.
ಹಾಗೂ ರೇಪ್ ಆರೋಪಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ತಕ್ಷಣ ಬಂಧಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಅವರು ಗುರುವಾರ ಕೆಪಿಸಿಸಿ ಕಚೇರಿಯಲ್ಲಿ
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಸಲೀಲೆ ಪ್ರಕರಣ ನಡೆದು 3 ತಿಂಗಳಾದರೂ ಈವರೆಗೆ ಆತನನ್ನು ಬಂಧಿಸದೆ ಇರುವುದು ಹೋಗಲಿ ವಿಚಾರಣೆ ಕೂಡ ನಡೆಸಿಲ್ಲ ಎಂದು ಕಿಡಿಕಾರಿದ್ದಾರೆ.
ಜೊತೆಗೆ ಆ ಸಿಡಿಯಲ್ಲಿರುವುದು ನಾನಲ್ಲ ಎಂದು ಹೇಳಿಕೆ ನೀಡುತ್ತಿದ್ದ ರಮೇಶ್ ಜಾರಕಿಹೊಳಿ ಈಗ ಸಿಡಿಯಲ್ಲಿರುವುದು ತಾನೇ ಎಂದು ಎಸ್ ಐ ಟಿ ಎದುರು ಹೇಳಿಕೆ ನೀಡಿದ್ದಾನೆ.
ಅತ್ಯಾಚಾರ ಆರೋಪವಿದ್ದರೂ ಅವರನ್ನು ಬಂಧಿಸದೇ ಓಡಾಡಿಕೊಂಡಿರಲು ಅವಕಾಶ ನೀಡಿರುವ ರಾಜ್ಯದ ಬಿಜೆಪಿ ಸರಕಾರ ಜನ ಸಾಮಾನ್ಯರಿಗೊಂದು ಜಾರಕಿಹೊಳಿಗೊಂದು ಕಾನೂನು ರೂಪಿಸಿದೆಯೇ ಎಂದು ತರಾಟೆಗೆ ತೆಗೆದುಕೊಂಡರು.
ಸಚಿವರಾದ ಸಿ.ಪಿ. ಯೋಗೇಶ್ವರ, ಎಸ್. ಟಿ ಸೋಮಶೇಖರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿ ವರ್ಗದವರು ಆರೋಪಿಯ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು.
ಹೀಗಾಗಿ ಈ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಮೇಲ್ಬಿಚಾರಣೆಯಲ್ಲಿ ಸ್ವತಂತ್ರ್ಯ ಸಂಸ್ಥೆಗೆ ತನಿಖೆ ನಡೆಸಲು ನೀಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಎಸ್ ಐಟಿ ಮುಖ್ಯಸ್ಥರಿಗೆ ರಜೆಯ ಮೇಲೆ ಕಳುಹಿಸಿ, ರಮೇಶ್ ಜಾರಕಿಹೊಳಿ ಗೃಹ ಸಚಿವ ಬೊಮ್ಮಾಯಿ ಭೇಟಿಗೆ ಅವಕಾಶ ನೀಡಲಾಗಿದೆ.
ರೇಪ್ ಕೇಸ್ ಆರೋಪಿಯನ್ನು ಬಂಧಿಸದೇ ಗೃಹ ಸಚಿವರ ಭೇಟಿಯಾಗಲು ಅವಕಾಶ ನೀಡಿರುವುದು ದೇಶದಲ್ಲಿಯೇ ಮೊದಲ ಪ್ರಕರಣ ಎಂದು ಗುಡುಗಿದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರೇಪ್ ಕೇಸ್ ಆರೋಪಿಯನ್ನು ಬಂಧಿಸಿದೇ ಬಿಟ್ಟಿರುವುದು ಕರ್ನಾಟಕ ಪೊಲೀಸರಿಗೆ ಘನತೆಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಇದು ಕರ್ನಾಟಕ ಪೊಲೀಸರ ಗೌರವದ ಪ್ರಶ್ನೆ. ಯಾರು ಏನೇ ಹೇಳಿದರೂ ಕೇಳದೇ ಮೊದಲು ಆರೋಪಿಯನ್ನು ಬಂಧಿಸಿ, ಕಾನೂನು ಕ್ರಮ ಕೈಗೊಂಡು ತಮ್ಮ ಕರ್ತವ್ಯ ಪಾಲಿಸಬೇಕು ಎಂದು ಡಿಕೆಶಿ ಆಗ್ರಹಿಸಿದ್ದಾರೆ.